ADVERTISEMENT

ಇಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌ ಬಂಧನ

ಕಬ್ಬಿಣದ ಅದಿರು ಅಕ್ರಮ ಸಾಗಣೆಗೆ ನೆರವು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 20:06 IST
Last Updated 4 ಮಾರ್ಚ್ 2019, 20:06 IST
ಶಿವಲಿಂಗು
ಶಿವಲಿಂಗು   

ಚಿತ್ರದುರ್ಗ: ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡುವ ಜಾಲಕ್ಕೆ ನೆರವು ನೀಡುತ್ತಿದ್ದ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ನಗರ ಪೊಲೀಸ್‌ ಠಾಣೆಯ ಇಮಾಮ್‌ ಹುಸೇನ್‌ ಹಾಗೂ ಗ್ರಾಮಾಂತರ ಪೊಲೀಸ್‌ ಠಾಣೆಯ ಶಿವಲಿಂಗ ಬಂಧಿತರು. ಅದಿರು ಅಕ್ರಮ ಸಾಗಣೆ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಸಂಖ್ಯೆ 11ಕ್ಕೆ ಏರಿದೆ. ಸಂಘಟಿತ ಅಪರಾಧದ ಜಾಲಕ್ಕೆ ಸಹಕಾರ ನೀಡುತ್ತಿದ್ದ ಆರೋಪಕ್ಕೆ ಪೊಲೀಸರೇ ಗುರಿಯಾಗಿರುವುದು ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.

ಭೀಮಸಮುದ್ರದಿಂದ ಬಳ್ಳಾರಿಗೆ ಅಕ್ರಮವಾಗಿ ಅದಿರು ಸಾಗಣೆ ಮಾಡುತ್ತಿದ್ದ ಐದು ಲಾರಿಗಳು ಫೆ.28ರಂದು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದವು. ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಎರಡು ಹಾಗೂ ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಠಾಣಾ ವ್ಯಾ‍ಪ್ತಿಯಲ್ಲಿ ಮೂರು ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಗಣಿಗಾರಿಕೆ ಹಾಗೂ ಸಾಗಣೆಗೆ ಅಧಿಕೃತ ಪರವಾನಗಿ ಹೊಂದಿಲ್ಲದೇ ಇರುವುದು ಮೇಲ್ನೋಟಕ್ಕೆ ಗೊತ್ತಾಗಿತ್ತು.

ADVERTISEMENT

ಐದು ಲಾರಿ ಚಾಲಕರು, ಮೂವರು ಲಾರಿ ಮಾಲೀಕರು ಹಾಗೂ ಜಾಲದ ರೂವಾರಿಯೊಬ್ಬನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ತನಿಖೆಯ ವೇಳೆ ಕಾನ್‌ಸ್ಟೆಬಲ್‌ಗಳು ನೆರವು ನೀಡುತ್ತಿರುವುದು ಬೆಳಕಿಗೆ ಬಂದಿತ್ತು. ಜಾಲದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ ಇಬ್ಬರು ಕಾನ್‌ಸ್ಟೆಬಲ್‌ಗಳು, ಅದಿರು ತುಂಬಿದ ಲಾರಿಗಳು ಜಿಲ್ಲೆಯ ಗಡಿ ದಾಟಿಸಲು ಸಹಕಾರ ನೀಡುತ್ತಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.