ಬೆಂಗಳೂರು: ‘ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸುವ ಕುರಿತಂತೆ ಆಡಳಿತ ಮಂಡಳಿಗಳ ಮತ್ತು ಪೋಷಕರ ಸಂಘಟನೆಗಳ ಪ್ರತಿನಿಧಿಗಳ ಸಭೆ ನಡೆಸಿರುವ ರಾಜ್ಯ ಸರ್ಕಾರ, ಈ ಬಗ್ಗೆ ಯಾವುದೇ ತೀರ್ಮಾನ ಪ್ರಕಟಿಸಿಲ್ಲ. ನಮ್ಮ ಬೇಡಿಕೆಗಳಿಗೆ ಜ. 28ರ ಒಳಗೆ ಸರ್ಕಾರ ಸ್ಪಂದಿಸದಿದ್ದರೆ ಮತ್ತೆ ಬೀದಿಗೆ ಇಳಿಯುತ್ತೇವೆ’ ಎಂದು ಪೋಷಕರ ಸಮನ್ವಯ ಸಮಿತಿ ಎಚ್ಚರಿಕೆ ನೀಡಿದೆ.
‘ಈಗಾಗಲೇ ನಾವು ಮೂರು ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದೇವೆ. ಆದರೆ, ಸರ್ಕಾರ ಸ್ಪಂದಿಸಿಲ್ಲ. ಕಸ ಗುಡಿಸುವ ಕಾರ್ಯಕ್ರಮ ಮಾಡಲು ಯತ್ನಿಸಿದಾಗ ಎಚ್ಚೆತ್ತ ಸರ್ಕಾರ, ಜ. 15ರಂದು ಸಭೆ ನಡೆಸಿತ್ತು. ಈ ಸಭೆ ನಡೆದು ಎರಡು ವಾರ ಕಳೆದರೂ ಶಿಕ್ಷಣ ಇಲಾಖೆ ಯಾವುದೇ ತೀರ್ಮಾನ ಪ್ರಕಟಿಸಿಲ್ಲ’ ಎಂದು ಆರ್ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘಟನೆಯ ಯೋಗಾನಂದ ದೂರಿದರು.
‘ಪೋಷಕರ ಜೊತೆ ಶಾಲಾ ಆಡಳಿತ ಮಂಡಳಿಯನ್ನು ಸೇರಿಸಿ ಸಭೆ ನಡೆಸಿದ್ದರಿಂದ ಗೊಂದಲವೂ ಉಂಟಾಗಿತ್ತು. ಆದರೂ, ಪೋಷಕರು ಬೇಡಿಕೆಗಳನ್ನು ಹೇಳಿಕೊಂಡಿದ್ದರು. ತೀರ್ಮಾನ ತೆಗೆದುಕೊಳ್ಳಲು ಸರ್ಕಾರ ಮಾಡುತ್ತಿರುವ ವಿಳಂಬ, ಖಾಸಗಿ ಶಾಲೆಯವರು ಬಲವಂತವಾಗಿ ಸಂಪೂರ್ಣ ಶುಲ್ಕ ವಸೂಲಿಗೆ ಅವಕಾಶ ಮಾಡಿಕೊಡುವ ಪ್ರಯತ್ನವಾಗಿದೆ. ಸಂಪೂರ್ಣ ಶುಲ್ಕ ಪಡೆದ ಮೇಲೆ ಸರ್ಕಾರ ಆದೇಶ ಹೊರಡಿಸಿ ಪ್ರಯೋಜನವಾದರೂ ಏನು’ ಎಂದೂ ಅವರು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.