ಬೆಂಗಳೂರು: ‘ಶಾಲಾ ಸುರಕ್ಷತೆ ಹಾಗೂ ಮಕ್ಕಳ ಹಿತದ ಉದ್ದೇಶದಿಂದ ಕಟ್ಟಡ ಮತ್ತು ಅಗ್ನಿ ಸುರಕ್ಷತೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಅನುಷ್ಠಾನದ ಅನಿವಾರ್ಯತೆನನ್ನ ಅಧಿಕಾರ ಅವಧಿಯಲ್ಲಿ ಎದುರಾಗಿತ್ತು. ಆಗ ಖಾಸಗಿ ಶಾಲೆಗಳಿಗೆ ಮಾರಕ ಆಗಬಾರದೆಂದು ಎಸ್.ವಿ.ಸಂಕನೂರ್ ನೇತೃತ್ವದಲ್ಲಿ ಸಮಿತಿ ರಚಿಸಿ ನಿಯಮಗಳನ್ನು ರೂಪಿಸಬೇಕೆಂದು ನಿರ್ದೇಶನ ನೀಡಿದ್ದೆ. ಅಲ್ಲಿಯವರೆಗೆ ನಿಗದಿತ ಅವಧಿ ಪೂರೈಸಿದ ಶಾಲೆಗಳ ನೋಂದಣಿ ನವೀಕರಣವನ್ನು ಒಂದು ವರ್ಷದ ಅವಧಿಗೆ ಮುಂದೂಡಲು ನಿರ್ದೇಶನ ನೀಡಿದ್ದೆ’ ಎಂದು ಶಾಸಕ, ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ತಿಳಿಸಿದ್ದಾರೆ.
‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾದ ‘ಶಿಕ್ಷಣ:ಲಂಚವೇ ‘ಭೂಷಣ‘! ವರದಿಯಲ್ಲಿರುವ ಕೆಲವು ಅಂಶಗಳಿಗೆ ಸ್ಪಷ್ಟನೆ ನೀಡಿರುವ ಅವರು, ‘ಖಾಸಗಿ ಶಾಲೆಗಳು ಇಲಾಖಾಧಿಕಾರಿಗಳ ಲಂಚಗುಳಿತನದ ಬಗ್ಗೆ ನನ್ನ ಗಮನಕ್ಕೆ ತಂದು ಪರಿಹಾರ ದೊರಕಿಸಬೇಕೆಂದು ಆಗ್ರಹಿಸಿದ್ದರು. ಆಗ ವಿವಿಧ ಇಲಾಖೆಗಳ ಮುಖ್ಯಸ್ಥರ, ಸಚಿವರ ಸಭೆ ನಡೆಸಿ, ಕೋವಿಡ್ನಂಥ ಪ್ರತಿಕೂಲ ಸಂದರ್ಭದಲ್ಲಿಯೂ ಏನು ಮಾಡಬಹುದೆಂದು ಚರ್ಚಿಸಿದ್ದೆ’ ಎಂದಿದ್ದಾರೆ.
‘ನೋಂದಣಿ ನವೀಕರಣ ಪ್ರಕ್ರಿಯೆ ಯನ್ನು ಕೇವಲ ಶಾಲೆಯ ವತಿಯಿಂದ ಸಲ್ಲಿಕೆಯಾಗುವ ಮುಚ್ಚಳಿಕೆ
ಪರಿಗಣಿಸಿ ನಿರ್ವಹಿಸಬೇಕು. ಯಾವುದೇ ಶಾಲೆಯವರು ಇಲಾಖಾ ಧಿಕಾರಿಗಳನ್ನು ಅನವಶ್ಯಕವಾಗಿ
ಭೇಟಿ ಮಾಡಬಾರದು ಎನ್ನುವ ಉದ್ದೇಶದಿಂದ ನೋಂದಣಿ ನವೀಕರಣ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ನಿರ್ವಹಿಸಬೇಕೆಂದು ಆದೇಶ ಮಾಡಿದ್ದೆ’ ಎಂದಿದ್ದಾರೆ.
‘ಖಾಸಗಿ ಶಾಲೆಗಳ ಆರೋಪವನ್ನು ಸ್ಥಿರೀಕರಿಸುವಾಗ ಸರ್ಕಾರ ತೆಗೆದು ಕೊಂಡಿರುವ ಕ್ರಮಗಳನ್ನೂ ಅವಲೋಕಿಸಬೇಕಾಗುತ್ತದೆ. ಶಾಲೆಗಳ ಆಡಳಿತ ಮಂಡಳಿಗಳು ಸುಖಾಸುಮ್ಮನೇ ಆರೋಪಿಸುವ ಬದಲು ದಾಖಲೆಗಳನ್ನು ಸಲ್ಲಿಸಿ, ಸಾಬೀತು ಮಾಡಬೇಕಾಗುತ್ತದೆ’ ಎಂದು
ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.