ಬೆಂಗಳೂರು: ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಹುದ್ದೆ ಕೊಡಿಸುವುದಾಗಿ ಹೇಳಿ ಅಭ್ಯರ್ಥಿಯೊಬ್ಬರಿಂದ ₹ 20 ಲಕ್ಷ ಪಡೆದು ವಂಚಿಸಲಾಗಿದ್ದು, ಆ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಚಿಂತಾಮಣಿಯ ಜನಾರ್ದನ್ ಎಂಬುವರು ಪಿಎಸ್ಐ ಹುದ್ದೆ ಆಕಾಂಕ್ಷಿ ಆಗಿದ್ದರು. ಅವರಿಗೆ ಪರಿಚಯವಾಗಿದ್ದ ಸಂತೋಷ್ ದುಮಾರೆ ಎಂಬಾತ, ‘ನನಗೆ ಪೊಲೀಸ್ ಅಧಿಕಾರಿಗಳ ಪರಿಚಯ ಇದೆ. ಹಣ ಕೊಟ್ಟರೆ ಪಿಎಸ್ಐ ಹುದ್ದೆ ಕೊಡಿಸುತ್ತೇನೆ’ ಎಂಬುದಾಗಿ ಹೇಳಿದ್ದ’ ಎಂದು ಪೊಲೀಸರು ಹೇಳಿದರು.
‘ಗಾಂಧಿನಗರದ ಹೋಟೆಲೊಂದರಲ್ಲಿ ಜನಾರ್ದನ್ ಅವರನ್ನು ಭೇಟಿಯಾಗಿದ್ದ ಆರೋಪಿಸಂತೋಷ್, ಎರಡು ಹಂತದಲ್ಲಿ ₹ 20 ಲಕ್ಷ ಪಡೆದಿದ್ದ. ಕೆಲ ದಿನ ಬಿಟ್ಟು, ‘ಪಿಎಸ್ಐ ಕೆಲಸಕ್ಕೆ ₹ 50 ಲಕ್ಷ ಬೇಕು. ಉಳಿದ ಹಣವನ್ನು ತಂದುಕೊಡು’ ಎಂದು ಹೇಳಲಾರಂಭಿಸಿದ್ದ. ಅನುಮಾನಗೊಂಡ ಜನಾರ್ದನ್, ಹಣ ವಾಪಸ್ ನೀಡುವಂತೆ ಒತ್ತಾಯಿಸಲಾರಂಭಿಸಿದ್ದರು. ಆರೋಪಿ ಹಣ ಕೊಟ್ಟಿರಲಿಲ್ಲ’ ಎಂದರು.
‘ವಂಚನೆ ಆರೋಪದಡಿ ಸಂತೋಷ್ ವಿರುದ್ಧ ಪ್ರಕರಣ ದಾಖಲಿಕೊಳ್ಳಲಾಗಿದೆ. ಆತನಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.