ADVERTISEMENT

ಬಿಸಿಲಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು !

ಸುಗಮವಾಗಿ ಆರಂಭಗೊಂಡ ದ್ವಿತೀಯ ಪಿಯುಸಿ ಮೊದಲ ದಿನದ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 18:40 IST
Last Updated 1 ಮಾರ್ಚ್ 2019, 18:40 IST
ಹೊಸಪೇಟೆಯ ಬಾಲಕಿಯರ ಕಾಲೇಜಿನ ಕಟ್ಟೆಯ ಮೇಲೆ ಶಾಮಿಯಾನ ನೆರಳಿನಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಪಿ.ಯು. ಪರೀಕ್ಷೆ ಬರೆದರು –ಪ್ರಜಾವಾಣಿ ಚಿತ್ರ
ಹೊಸಪೇಟೆಯ ಬಾಲಕಿಯರ ಕಾಲೇಜಿನ ಕಟ್ಟೆಯ ಮೇಲೆ ಶಾಮಿಯಾನ ನೆರಳಿನಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಪಿ.ಯು. ಪರೀಕ್ಷೆ ಬರೆದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಳ್ಳಾರಿ ಜಿಲ್ಲೆ ಹೊಸಪೇಟೆ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿ
ಗಳು ಕಟ್ಟೆಯ ಮೇಲೆ ಕುಳಿತು ಬಿಸಿಲಿನಲ್ಲೇ ದ್ವಿತೀಯ ಪಿಯು ಪರೀಕ್ಷೆ ಬರೆದರೆ, ಹಿರಿಯೂರು ತಾಲ್ಲೂಕು ಹರಿಯಬ್ಬೆ ಪರೀಕ್ಷಾ ಕೇಂದ್ರದಲ್ಲಿ ರಾತ್ರಿಯೇ ಸಿಸಿ ಟಿವಿ ಕ್ಯಾಮೆರಾಗಳನ್ನು ಕಳ್ಳರು ಕದ್ದುಕೊಂಡು ಹೋಗಿರುವ ಘಟನೆ ನಡೆದಿದೆ.

ರಾಮನಗರ ಜಿಲ್ಲೆ ಮಾಗಡಿಯಲ್ಲಿ ಕಾಪಿ ಮಾಡಲು ಹೋಗಿ ಸಿಕ್ಕಿ ಬಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್‌ ಮಾಡಲಾಗಿದೆ. ಈ ರೀತಿಯ ಕೆಲವು ಸಣ್ಣ– ಪುಟ್ಟ ಘಟನೆಗಳನ್ನು ಬಿಟ್ಟು ಮೊದಲ ದಿನದ ಪಿಯು ಪರೀಕ್ಷೆ ಸುಗಮವಾಗಿ ನಡೆಯಿತು.

ಶುಕ್ರವಾರ ಭೌತ ವಿಜ್ಞಾನ ಮತ್ತು ಅರ್ಥಶಾಸ್ತ್ರ ಪತ್ರಿಕೆಗಳ ಪರೀಕ್ಷೆ ಇತ್ತು. ಭೌತವಿಜ್ಞಾನದ ಪರೀಕ್ಷೆಗೆ ಶೇ 98 ಮತ್ತು ಅರ್ಥಶಾಸ್ತ್ರ ಶೇ 95 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಪಿ.ಸಿ.ಜಾಫರ್‌ ತಿಳಿಸಿದರು.

ADVERTISEMENT

ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಮತ್ತು ಒಳಗೆ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗಿತ್ತು. ಪರೀಕ್ಷಾ ಅಕ್ರಮಗಳು ನಡೆಯದಂತೆ ಸ್ಕ್ವಾಡ್‌ಗಳು ಕಟ್ಟೆಚ್ಚರ ವಹಿಸಿದ್ದವು.

ಹೊಸಪೇಟೆಯಸರ್ಕಾರಿ ಬಾಲಕಿಯರ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಶಾಲೆಯ ಕಟ್ಟೆಯ ಮೇಲೆ ಬಿಸಿಲಿನಲ್ಲಿ ಕುಳಿತುಕೊಳ್ಳುವ ಸ್ಥಿತಿ ಬಂದಾಗ ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಬಳಿಕ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಶಾಮಿಯಾನ ವ್ಯವಸ್ಥೆ ಮಾಡಲಾಯಿತು.

ಹರಿಯಬ್ಬೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಾಲ್ಕು ಕೊಠಡಿಗಳ ಬೀಗ ಮುರಿದಿರುವ ಕಳ್ಳರು, ಅಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಗುರುವಾರ ರಾತ್ರಿ ಕದ್ದಿದ್ದಾರೆ. ‘ಈ ಪರೀಕ್ಷಾ ಕೇಂದ್ರದಲ್ಲಿ ಈಗಾಗಲೇ ಮೂರು ಬಾರಿ ಈ ರೀತಿಯಾಗಿದೆ. ಪ್ರತಿ ಪರೀಕ್ಷೆಗೆ ಮುನ್ನಾ ದಿನವೇ ಘಟನೆಗಳು ಮರುಕಳಿ
ಸುತ್ತಿರುವುದು ನಮಗೆ ತಲೆನೋವಾಗಿದೆ’ ಎಂದು ಕಾಲೇಜಿನ ಎಸ್ ಬಿಸಿ ಸಮಿತಿಯ ಉಪಾಧ್ಯಕ್ಷ ಹೆಂಜಾರಪ್ಪ ತಿಳಿಸಿದ್ದಾರೆ.

ಪರೀಕ್ಷೆಗೆ ಹಾಜರಾದವರು: ಭೌತವಿಜ್ಞಾನ ಪರೀಕ್ಷೆಗೆ 1,97,323 ವಿದ್ಯಾರ್ಥಿಗಳ ಪೈಕಿ 1,92,699 ವಿದ್ಯಾರ್ಥಿಗಳು ಹಾಜರಾಗಿದ್ದರು. 4654 ವಿದ್ಯಾರ್ಥಿಗಳು ಹಾಜರಾಗಿರಲಿಲ್ಲ. ಅರ್ಥಶಾಸ್ತ್ರ (ಎನ್ಎಸ್‌) 3,62,058 ವಿದ್ಯಾರ್ಥಿಗಳ ಪೈಕಿ 3,43,749 ವಿದ್ಯಾರ್ಥಿಗಳು ಹಾಜರಾಗಿದ್ದರು. 18,308 ವಿದ್ಯಾರ್ಥಿಗಳು ಹಾಜರಾಗಿರಲಿಲ್ಲ. ಅರ್ಥಶಾಸ್ತ್ರ(ಒಎಸ್‌) 15, 327 ವಿದ್ಯಾರ್ಥಿಗಳ ಪೈಕಿ 12,546 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆಮ 2781 ವಿದ್ಯಾರ್ಥಿಗಳು ಗೈರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.