ಬೆಂಗಳೂರು: ಮೌಲ್ಯಮಾಪನದ ಸಂಭಾವನೆ ನೀಡಬೇಕು, ನೆಟ್, ಸ್ಲೆಟ್, ಪಿಎಚ್.ಡಿ ಪದವಿ ಪಡೆದ ಉಪನ್ಯಾಸಕರಿಗೆ ಪದವಿ ಕಾಲೇಜುಗಳಿಗೆ ಬಡ್ತಿ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮಂಗಳವಾರ ಇಲ್ಲಿಧರಣಿ ಸತ್ಯಾಗ್ರಹ ನಡೆಸಿದರು. ಅಲ್ಲದೆ ಪೂರಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸ್ಥಗಿತಗೊಳಿಸಿದರು.
ಧರಣಿ ಸ್ಥಳಕ್ಕೆ ಬಂದ ನೂತನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್, ಮೌಲ್ಯಮಾಪನ ಸಂಭಾವನೆಯನ್ನು ಎರಡು ದಿನದೊಳಗೆ ಕೊಡಿಸುವುದಾಗಿ ಹೇಳಿದರು. ಉಳಿದ ಬೇಡಿಕೆಗಳ ಬಗ್ಗೆ ಚರ್ಚಿಸಲು ಒಂದು ವಾರದೊಳಗೆ ಸಭೆ ಕರೆಯುವ ಭರವಸೆ ನೀಡಿದರು. ಹೀಗಾಗಿ ಧರಣಿಯನ್ನು ಕೊನೆಗೊಳಿಸಲಾಯಿತು.
‘ಉಪನ್ಯಾಸಕರ ಕಾಲ್ಪನಿಕ ವೇತನ ಸಮಸ್ಯೆ ಬಗೆಹರಿಸಬೇಕು, ಪ್ರೌಢಶಾಲೆಯಿಂದ ಪದೋನ್ನತಿ ಹೊಂದಿದ ಉಪನ್ಯಾಸಕರಿಗೆ ಕಾಲಮಿತಿ ಬಡ್ತಿಯನ್ನು 6ನೇ ವೇತನ ಆಯೋಗದ 2ನೇ ವರದಿಯಲ್ಲಿ ಸೂಚಿಸಿರುವಂತೆ ಕೂಡಲೇ ಮಂಜೂರು ಮಾಡಬೇಕು, 600 ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಯನ್ನು ತಕ್ಷಣ ಭರ್ತಿ ಮಾಡಬೇಕು ಎಂಬ ಬೇಡಿಕೆ ಸಹಿತ ಒಟ್ಟು 15 ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ. ನಿಜವಾದ ಸಮಸ್ಯೆಗಳನ್ನು ಬದಿಗಿಟ್ಟು ಇನ್ಯಾವುದೋ ವಿಷಯ ಎಳೆದು ತರುವ ಪ್ರಯತ್ನ ಅಧಿಕಾರಿಗಳಿಂದ ನಡೆಯುತ್ತಿದೆ. ಇನ್ನಷ್ಟು ದಿನ ಇದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ’ ಎಂದು ಕರ್ನಾಟಕ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದರು.
ಸಂಘದ ಸಂಘದ ಕಾರ್ಯಾಧ್ಯಕ್ಷ ಎಸ್.ಆರ್.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎ.ಎಚ್.ನಿಂಗೇಗೌಡ, ಕೋಶಾಧಿಕಾರಿ ಎಂ.ಜಯಣ್ಣ, ವಿವಿಧ ಜಿಲ್ಲೆಗಳ ಅಧ್ಯಕ್ಷರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.