ADVERTISEMENT

ರಾಯಚೂರು ವಿದ್ಯಾರ್ಥಿನಿ ಕೊಲೆ: ತನಿಖೆ ಚುರುಕು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 5:49 IST
Last Updated 23 ಏಪ್ರಿಲ್ 2019, 5:49 IST
ರಾಯಚೂರಿನಲ್ಲಿ ಈಚೆಗೆ ನೇಣುಬಿಗಿದ ಸ್ಥಿತಿಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಶವ ದೊರೆತ ಮರದ ಬಳಿ ಸಿಐಡಿ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಂಡದವರು ಸೋಮವಾರ ಪರಿಶೀಲನೆ ನಡೆಸಿದರು
ರಾಯಚೂರಿನಲ್ಲಿ ಈಚೆಗೆ ನೇಣುಬಿಗಿದ ಸ್ಥಿತಿಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಶವ ದೊರೆತ ಮರದ ಬಳಿ ಸಿಐಡಿ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಂಡದವರು ಸೋಮವಾರ ಪರಿಶೀಲನೆ ನಡೆಸಿದರು   

ರಾಯಚೂರು: ಎಂಜಿನಿಯರಿಂಗ್‌ ವಿದ್ಯಾರ್ಥಿನಿಯ ಶಂಕಾಸ್ಪದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ತಂಡವು, ಪ್ರತ್ಯೇಕ ವರದಿ ಸಿದ್ಧತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರ ತಂಡವೊಂದನ್ನು ಬೆಂಗಳೂರಿನಿಂದ ಸೋಮವಾರ ಕರೆಸಿಕೊಂಡಿದೆ.

‘ವಿಧಿವಿಜ್ಞಾನ ತಂಡವು ಅಪರಾಧ ನಡೆದ ಸ್ಥಳದ ಚಿತ್ರಣ ಆಧರಿಸಿ, ಸ್ಥಳದಲ್ಲಿರುವ ಸಾಕ್ಷ್ಯಗಳನ್ನು ಪರಿಶೀಲನೆ ಮಾಡುತ್ತದೆ. ಈ ಘಟನೆ ಹೇಗೆ ನಡೆದಿದೆ ಎಂಬುದರ ಮಾಹಿತಿಯನ್ನು ನೀಡುತ್ತದೆ. ಅಪರಾಧವನ್ನು ಹಲವು ಆಯಾಮಗಳಲ್ಲಿ ವೈಜ್ಞಾನಿಕವಾಗಿ ತನಿಖೆ ಮಾಡಲಾಗುತ್ತಿದೆ’ ಎಂದು ಸಿಐಡಿ ಪೊಲೀಸ್‌ ವರಿಷ್ಠಾಧಿಕಾರಿ ಶರಣಪ್ಪ ಸುದ್ದಿಗಾರರಿಗೆ ತಿಳಿಸಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ಸಂಬಂಧಿಗಳಿಂದಲೂ ಮಾಹಿತಿ ಸಂಗ್ರಹ ಮಾಡುತ್ತೇವೆ. ಇನ್ನು ಬೇರೆ ಯಾರಾದರೂ ಮಾಹಿತಿ ಕೊಡಬೇಕು ಅನ್ನಿಸಿದರೆ, ಅಂಥವರು ನಮ್ಮನ್ನು ಸಂಪರ್ಕಿಸಿ ಮಾಹಿತಿ ಹಂಚಿಕೊಳ್ಳಬಹುದು’ ಎಂದು ಹೇಳಿದರು.

ADVERTISEMENT

ನೇತಾಜಿ ನಗರ ಠಾಣೆಯಿಂದ ಪ್ರಕರಣವನ್ನು ಹಸ್ತಾಂತರ ಮಾಡಿಸಿಕೊಂಡಿರುವ ಸಿಐಡಿ ಅಧಿಕಾರಿಗಳು, ಇವರೆಗೂ ತನಿಖೆ ಮಾಡಿದ್ದ ಪೊಲೀಸರೊಂದಿಗೆ ಕೃಷಿ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಮಧ್ಯಾಹ್ನದವರೆಗೂ ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.