ಕಲಬುರಗಿ: ‘ಸಾಮಾನ್ಯ ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ಹಾಗೂ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಭಾರತೀಯ ರೈಲ್ವೆಯು ಶೀಘ್ರವೇ 10 ಸಾವಿರ ಜನರಲ್ ಬೋಗಿಗಳನ್ನು ಪ್ರಯಾಣಿಕರ ಸೇವೆಗೆ ಸೇರ್ಪಡೆ ಮಾಡಿಕೊಳ್ಳಲಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇಲ್ವರ್ಗದವರ ಅನುಕೂಲಕ್ಕಾಗಿ ಎ.ಸಿ. ಬೋಗಿಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದನ್ನು ಹೋಗಲಾಡಿಸಲು 10 ಸಾವಿರ ಹೊಸ ಜನರಲ್ ಬೋಗಿಗಳು ಸಿದ್ಧವಾಗಿವೆ. ಹಂತ–ಹಂತವಾಗಿ ಹಳೇ ಬೋಗಿಗಳನ್ನು ತೆಗೆದು ಹೊಸ ಬೋಗಿಗಳನ್ನು ಅಳವಡಿಸಲಾಗುವುದು’ ಎಂದು ಹೇಳಿದರು.
‘ರಾಜ್ಯದಲ್ಲಿ 13 ಜಿಲ್ಲೆಗಳಲ್ಲಿ ವಂದೇ ಭಾರತ್ ರೈಲುಗಳು ಓಡುತ್ತಿವೆ. ಮಂಗಳೂರು–ಬೆಂಗಳೂರು, ಬೆಳಗಾವಿ– ಬೆಂಗಳೂರು ನಡುವೆ ವಂದೇ ಭಾರತ್ ರೈಲು ಓಡಿಸುವಂತೆ ಬೇಡಿಕೆ ಬರುತ್ತಿದ್ದು, ಶೀಘ್ರವೇ ಆ ರೈಲುಗಳಿಗೆ ಚಾಲನೆ ನೀಡಲಾಗುವುದು’ ಎಂದು ಹೇಳಿದರು.
‘ವಿದ್ಯುದ್ದೀಕರಣದಿಂದ ರೈಲ್ವೆಗೆ ಪ್ರತಿ ವರ್ಷ ಸುಮಾರು ₹ 18 ಸಾವಿರ ಕೋಟಿ ಉಳಿತಾಯ ಆಗುತ್ತಿದೆ. ಹೀಗಾಗಿ, ಪ್ರತಿಯೊಂದು ಹೊಸ ರೈಲು ಹಳಿಯನ್ನು ವಿದ್ಯುದ್ದೀಕರಣದ ಮೂಲಕ ಆರಂಭಿಸುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.