ಬೆಂಗಳೂರು: ಹಾನಸ ಜಿಲ್ಲೆಯ ಶ್ರವಣಬೆಳಗೊಳ, ಚಿತ್ರದುರ್ಗ ಜಿಲ್ಲೆ ಮತ್ತು ಹುಬ್ಬಳ್ಳಿಯ ಕೆಲವೆಡೆ ಬುಧವಾರ ಉತ್ತಮ ಮಳೆಯಾಗಿದೆ.
ಶ್ರವಣಬೆಳಗೊಳದಲ್ಲಿ ಒಂದೇ ದಿನ 6.27 ಸೆಂ.ಮೀ ಮಳೆಯಾಗಿದೆ. ಇದರಿಂದ ರೈತರ ಮುಖದಲ್ಲಿ ಹರ್ಷ ಮೂಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಮಂಗಳವಾರ ಮಧ್ಯರಾತ್ರಿ ನಂತರ ಉತ್ತಮ ಮಳೆಯಾಗಿದ್ದು, ಕೆಲವೆಡೆ ಹೊಂಡ, ಹಳ್ಳ-ಕೊಳ್ಳಗಳು ಮೈದುಂಬಿ ಹರಿದಿವೆ.
ಎರಡು ವರ್ಷಗಳ ನಂತರ ಚಿತ್ರದುರ್ಗದ ಗೋಪಾಲಸ್ವಾಮಿ, ಸಿಹಿನೀರು ಹೊಂಡಗಳು ಕೋಡಿ ಬಿದ್ದಿವೆ. ಹಿರಿಯೂರು ತಾಲ್ಲೂಕಿನ ಬಬ್ಬೂರು ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಸೂಗೂರು, ಇಕ್ಕನೂರು, ಈಶ್ವರಗೆರೆ ಭಾಗಗಳಲ್ಲೂ ಉತ್ತಮ ಮಳೆಯಾಗಿದೆ. ಮೊಳಕಾಲ್ಮುರು ಪಟ್ಟಣ ಸೇರಿ ತಾಲ್ಲೂಕಿನ ರಾಯಪುರ ಹಾಗೂ ಬಿ.ಜಿ. ಕೆರೆಯಲ್ಲಿ ಹದ ಮಳೆಯಾಗಿದೆ.
3ರಂದು ಭಾರಿ ಮಳೆ ಸಾಧ್ಯತೆ: ದಕ್ಷಿಣ ಒಳನಾಡಿನ ಎಲ್ಲ ಭಾಗಗಳಲ್ಲಿ ಅ.3 ಮತ್ತು 4ರಂದು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಭಾಗದ ಎಲ್ಲ ಜಿಲ್ಲೆಗಳಲ್ಲಿ ಗುರುವಾರ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಕೆಲವು ಪ್ರದೇಶದಲ್ಲಿ ಅ.4ರಿಂದ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಮಳೆ ಕಡಿಮೆ ಇರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.