ADVERTISEMENT

ಧಾರಾಕಾರ ಮಳೆ: ನೀರಲ್ಲಿ ಕೊಚ್ಚಿಹೋದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 17:01 IST
Last Updated 10 ಸೆಪ್ಟೆಂಬರ್ 2020, 17:01 IST
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕು ಚಿಕ್ಕಜಾಯಿಗನೂರು ಬಳಿಯ ನಾರಿಹಳ್ಳ ವ್ಯಾಪ್ತಿಯ ಪಂಪ್‍ಸೆಟ್ ಕೊಠಡಿಗಳು ಜಲಾವೃತವಾಗಿರುವುದು
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕು ಚಿಕ್ಕಜಾಯಿಗನೂರು ಬಳಿಯ ನಾರಿಹಳ್ಳ ವ್ಯಾಪ್ತಿಯ ಪಂಪ್‍ಸೆಟ್ ಕೊಠಡಿಗಳು ಜಲಾವೃತವಾಗಿರುವುದು   

ಬೆಂಗಳೂರು: ರಾಜ್ಯದ ವಿಜಯಪುರ, ಬೆಳಗಾವಿ ಸೇರಿದಂತೆ ಹಲವೆಡೆ ಗುರುವಾರ ಉತ್ತಮ ಮಳೆಯಾಗಿದೆ. ವಿಜಯಪುರ ನಗರ ಸೇರಿ ಜಿಲ್ಲೆಯ ಹಲವೆಡೆ ವರುಣನ ಆರ್ಭಟ ಹೆಚ್ಚಿತ್ತು. ತಾಳಿಕೋಟೆಯಲ್ಲಿ ಡೋಣಿ ಪ್ರವಾಹ ತಗ್ಗಿದ್ದು, ಹಡಗಿನಾಳ ಸಂಪರ್ಕಿಸುವ ಸೇತುವೆ ಜನ ಸಂಚಾರಕ್ಕೆ ಮುಕ್ತವಾಗಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ, ಕೌಜಲಗಿ ಹಾಗೂ ಬೈಲಹೊಂಗಲ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಯಿತು. ಸುತಗಟ್ಟಿಯಿಂದ ಹಿಟ್ಟಣಗಿ ಗ್ರಾಮ ಸಂಪರ್ಕ ಕಲ್ಪಿಸುವ ಸೇತುವೆ ಮಳೆಯಿಂದ ಕುಸಿದಿದ್ದು, ಎರಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಕೊಚ್ಚಿಹೋದ ವ್ಯಕ್ತಿ: ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಶ್ರೀರಾಮರಂಗಾಪುರ ಗ್ರಾಮದ ರಾಮಪ್ಪನಹಳ್ಳದ ಸೇತುವೆ ದಾಟುವಾಗ ಶಿವಪ್ಪ ಹೊನ್ನೂರಪ್ಪ (55) ಗುರುವಾರ ಕಾಲುಜಾರಿ ಬಿದ್ದು ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.

ADVERTISEMENT

ಸಿರುಗುಪ್ಪ ತಾಲ್ಲೂಕಿನ ಹಿರೇಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ತಾಳೂರು ಮಾರ್ಗದ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಕುರುಗೋಡು ತಾಲ್ಲೂಕಿನ ಮದಿರೆ ಗ್ರಾಮದ ಬಳಿ ಸೇತುವೆ ಮೇಲೆ ಹಳ್ಳ ಹರಿದು ಕೋಳೂರು ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿತು. ಮಾಳಾಪುರ ಗ್ರಾಮದಲ್ಲಿ 8 ಮನೆಗಳು ಬಿದ್ದಿವೆ.

ಕಣ್ಮರೆ: ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಹೋಬಳಿಯ ನರಸೀಪುರ ಬಳಿ ಹಿರೇಹಳ್ಳದಲ್ಲಿ ಗುರುವಾರ ಮೀನು ಹಿಡಿಯಲು ಹೋಗಿದ್ದ ಇಬ್ಬರು ಬಾಲಕರು ಕಣ್ಮರೆಯಾಗಿದ್ದು, ಹಳ್ಳದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಕೋಣಂದೂರಿನಲ್ಲಿ ಭಾರಿ ಮಳೆಗೆ ಸೇತುವೆ ಕುಸಿದಿದೆ. ಕರಾವಳಿಯಲ್ಲಿ ಸಮುದ್ರ ತೀರದ ಪ್ರದೇಶಗಳಲ್ಲೇ ಅಬ್ಬರ ಹೆಚ್ಚಿತ್ತು. ಮಂಗಳೂರಿನಲ್ಲಿ 2.5 ಸೆಂ.ಮೀ.ಗೂ ಅಧಿಕ ಮಳೆ ಸುರಿದಿದೆ.

‘ಮೀನುಗಾರರಿಗೆ ಹವಾಮಾನ ಮುನ್ಸೂಚನೆ ನೀಡಲಾಗಿದೆ. ನಾಡದೋಣಿ, ಪರ್ಸಿನ್‌ ಬೋಟ್‌ಗಳು ಮೀನುಗಾರಿಕೆಗೆ ತೆರಳಿಲ್ಲ. ಆದರೆ, ಈಗಾಗಲೇ ಕೆಲವು ಟ್ರಾಲ್ ಬೋಟ್‌ಗಳು ಸಮುದ್ರಕ್ಕೆ ತೆರಳಿದ್ದು, ಮೀನುಗಾರಿಕೆಯಲ್ಲಿವೆ’ ಎಂದು ಮೀನುಗಾರಿಕಾ ಉಪನಿರ್ದೇಶಕ ಪಾರ್ಶ್ವನಾಥ ತಿಳಿಸಿದರು.

ಉಡುಪಿ ಜಿಲ್ಲೆಯ ಕೆಲವೆಡೆ, ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ತುಮಕೂರಿನ ತುರುವೇಕೆರೆ ತಾಲ್ಲೂಕು ದುಂಡಾ ಮತ್ತು ಸಂಪಿಗೆ ಗ್ರಾಮದಲ್ಲಿ ತಲಾ ಒಂದು ಮನೆ ಕುಸಿದಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯಲ್ಲಿ ಹೊಲಗಳಲ್ಲಿ ಬದುಗಳು ಕೊಚ್ಚಿಹೋಗಿವೆ. ರಾಯಚೂರು ಜಿಲ್ಲೆಯ ಮಾನ್ವಿ, ಕವಿತಾಳದಲ್ಲಿ ಉತ್ತಮ ಮಳೆಯಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.