ADVERTISEMENT

ಸತತ ಮಳೆ | ತಂಪಾದ ಇಳೆ: ಕಲಬುರಗಿಯಲ್ಲಿ 25 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದ ತಾಪಮಾನ

​ಪ್ರಜಾವಾಣಿ ವಾರ್ತೆ
Published 28 ಮೇ 2025, 23:39 IST
Last Updated 28 ಮೇ 2025, 23:39 IST
   

ಮೈಸೂರು: ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಬುಧವಾರ ವರುಣನ ಅಬ್ಬರ ಮುಂದು ವರಿದಿದೆ. ಸತತ ಮಳೆಯಿಂದಾಗಿ ಕಲಬುರಗಿಯ ತಾಪಮಾನ 25 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.

ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಿಸಿಲೆ ರಸ್ತೆಯಲ್ಲಿ ವಿದ್ಯುತ್ ತಂತಿಗಳೊಂದಿಗೆ ಮರ ಬಿದ್ದಿದ್ದು, ಸುಬ್ರಹ್ಮಣ್ಯಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು.

ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕಿನಲ್ಲಿ ಮಳೆಯಾಗುತ್ತಿದ್ದು, ಕೊಡಗಿನಲ್ಲಿ ಎರಡು ದಿನ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ADVERTISEMENT

ಹಾರಂಗಿ ಜಲಾಶಯದ ಮಟ್ಟ ಬುಧವಾರ 2,841.93 ಅಡಿಗಳಿಗೆ ತಲುಪಿದೆ. (2,859 ಅಡಿ ಗರಿಷ್ಠ ಮಟ್ಟ) 4,724 ಕ್ಯುಸೆಕ್ ಒಳ ಹರಿವಿದೆ.

ಬೇಲೂರು ತಾಲ್ಲೂಕಿನ ಯಗಚಿ ಜಲಾಶಯ ಭರ್ತಿಯಾಗಿದೆ. ಹೇಮಾವತಿ ಜಲಾಶಯಕ್ಕೆ 22 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯ ಭರ್ತಿಗೆ ಇನ್ನು 18 ಅಡಿ ಬಾಕಿ ಇದೆ.

ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಹಲವೆಡೆ  ಮಳೆ ಮುಂದುವರಿದಿದೆ. 

ಬೀದರ್‌, ಕಮಲನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮಾಂಜ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಔರಾದ್ ತಾಲ್ಲೂಕಿನ ಕೌಠಾ (ಬಿ) ಸೇತುವೆ ಸಮೀಪದಿಂದ ಬೀದರ್ ತಾಲ್ಲೂಕಿನ ಇಸ್ಲಾಂಪುರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ಹರಿಯುತ್ತಿದೆ.  ರಾಯಚೂರು, ಯಾದಗಿರಿಯಲ್ಲಿ ಮಳೆಯಾಗಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ದಿನವಿಡೀ ಸುರಿದ ಮಳೆ, ಸಂಜೆ ಬಳಿಕ ಮಳೆ ಬಿರುಸು ಪಡೆಯಿತು.

ಮಳೆ ಗಾಳಿಯ ಅಬ್ಬರದ ಪರಿಣಾಮ ಅಂಕೋಲಾ ತಾಲ್ಲೂಕಿನ ಹಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಂಗಮೇಟ ಮಜರೆಯಲ್ಲಿ ಕಡಲು ಕೊರೆತ ಆರಂಭಗೊಂಡಿದೆ. ಕೆಲ ತಿಂಗಳ ಹಿಂದೆ ನಿರ್ಮಿಸಿದ್ದ ಅಲೆ ತಡೆಗೋಡೆಯು ಅಲೆಗಳ ಅಬ್ಬರಕ್ಕೆ ಸಮುದ್ರ ಪಾಲಾಗಿದೆ.

ಚಡಚಣ (ವಿಜಯಪುರ ಜಿಲ್ಲೆ): ಉಜನಿ ಹಾಗೂ ವೀರಾ ಆಣೆಕಟ್ಟು ಜಲಾಯನ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಭೀಮಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.