ADVERTISEMENT

ರಾಜ್ಯದ ವಿವಿಧೆಡೆ ಮಳೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 22:50 IST
Last Updated 3 ಜೂನ್ 2021, 22:50 IST
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಗುರುವಾರ ಸಂಜೆ ಜೋರು ಮಳೆಯಾದ್ದರಿಂದ ಹೂಲಿ ಆಸ್ಪತ್ರೆ ಎದುರಿನ ಧಾರವಾಡ ರಸ್ತೆಯ ಜಲಾವೃತವಾಗಿತ್ತು
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಗುರುವಾರ ಸಂಜೆ ಜೋರು ಮಳೆಯಾದ್ದರಿಂದ ಹೂಲಿ ಆಸ್ಪತ್ರೆ ಎದುರಿನ ಧಾರವಾಡ ರಸ್ತೆಯ ಜಲಾವೃತವಾಗಿತ್ತು   

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುವಾರ ಮಳೆಯಾಗಿದೆ. ಕೆಲವೆಡೆ ಗುಡುಗು–ಸಿಡಿಲಿನ ಆರ್ಭಟದ ಪರಿಣಾಮ ವಿದ್ಯುತ್ ವ್ಯತ್ಯಯವಾಗಿ ಜನರು ಪರದಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ವಿವಿಧೆಡೆ, ಹುಬ್ಬಳ್ಳಿ–ಧಾರವಾಡ, ವಿಜಯ‍ಪುರ, ವಿಜಯನಗರ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಗುರುವಾರ ಮಳೆಯಾಗಿದೆ.

ಬೆಳಗಾವಿ ನಗರ, ಗೋಕಾಕ, ಹಾರೂಗೇರಿ, ಚಿಕ್ಕೋಡಿ, ಮೂಡಲಗಿ, ಮುನವಳ್ಳಿ, ರಾಮದುರ್ಗ, ಸವದತ್ತಿ, ಸಂಕೇಶ್ವರ, ಕೌಜಲಗಿ, ಹುಕ್ಕೇರಿ, ಕಿತ್ತೂರು, ಬೈಲಹೊಂಗಲ, ಘಟಪ್ರಭಾ ಪ್ರದೇಶದಲ್ಲಿ ಮಳೆಯಾಯಿತು.

ADVERTISEMENT

ಧಾರವಾಡದಲ್ಲಿ ಅರ್ಧ ತಾಸು ಬಿರುಗಾಳಿ ಸಹಿತ ಮಳೆ ಸುರಿಯಿತು. ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲಿ ಜೋರು ಮಳೆಯಾಗಿದೆ. ವಿಜಯನಗರ–ಬಳ್ಳಾರಿ ಜಿಲ್ಲೆಯ ಹಲವೆಡೆ ಬುಧವಾರ ರಾತ್ರಿಯಿಡಿ ಮಳೆಯಾಗಿದ್ದು ಗುರುವಾರ
ವೂ ಗುಡುಗು ಸಹಿತ ಮಳೆಯಾಗಿದೆ. ವಿಜ
ಯಪುರ ಜಿಲ್ಲೆಯ ಸಿಂದಗಿ, ಆಲಮೇಲ, ಇಂಡಿ, ಬಸವ ಬಾಗೇವಾಡಿ ಸೇರಿದಂತೆ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಹಾವೇರಿ ರಟ್ಟಿಹಳ್ಳಿಯಲ್ಲಿ ಗುಡುಗು ಸಹಿತ ಮಳೆಯಾಗಿದೆ.

ಉತ್ತರ ಕನ್ನಡದ ಯಲ್ಲಾಪುರ ತಾಲ್ಲೂಕಿನ ಕೆಲವೆಡೆ, ಹೊನ್ನಾವರ, ಭಟ್ಕಳದಲ್ಲಿ ಮಳೆಯಾಗಿದೆ. ದಾಂಡೇಲಿ
ಯಲ್ಲಿ ತುಂತುರು ಹನಿಗಳು ಬಿದ್ದಿವೆ. ಕಾರವಾರ, ಶಿರಸಿ, ಸಿದ್ದಾಪುರ ಭಾಗದಲ್ಲಿ ದಿನವಿಡೀ ಮೋಡ, ಬಿಸಿಲು ಇತ್ತು.

ಕಲಬುರ್ಗಿ, ಮಂಗಳೂರಲ್ಲಿ ಧಾರಾಕಾರ ಮಳೆ

ಕಲಬುರ್ಗಿ: ಕಲಬುರ್ಗಿ, ಯಾದಗಿರಿ, ಬೀದರ್ ಮತ್ತು ಕೊಪ್ಪಳ ಜಿಲ್ಲೆಯ ಕೆಲ ಕಡೆ ಬುಧವಾರ ರಾತ್ರಿ ಮತ್ತು ಗುರುವಾರ ಮಳೆಯಾಯಿತು. ಕಲಬುರ್ಗಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗಿನ ಜಾವ ಭಾರಿ ಮಳೆಯಾಗಿದೆ.ಕಾಳಗಿ ತಾಲ್ಲೂಕಿನ ‌ಕೋಡ್ಲಿ ಗ್ರಾಮದಲ್ಲಿ 108.4 ಮಿ.ಮಿ. ದಾಖಲೆಯ ಮಳೆ ಸುರಿದಿದೆ. ಗೋಟೂರ, ಕೋರವಾರ, ಅಶೋಕನಗರದಲ್ಲಿ ಮಳೆಯಾಗಿದೆ. ಕಾಳಗಿಯ ರೌದ್ರಾವತಿ ನದಿ ಮತ್ತು ಕಣಸೂರ ಹಳ್ಳಕ್ಕೆ ಹೊಸ ನೀರು ಅಧಿಕ ಪ್ರಮಾಣದಲ್ಲಿ ಹರಿದುಬಂತು.ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ, ಸುಲೇಪೇಟ, ಚಿಂಚೋಳಿ, ಐನಾಪುರ, ನಿಡಗುಂದಾ, ಜೇವರ್ಗಿ ತಾಲ್ಲೂಕಿನ ನೆಲೋಗಿ, ಜೇರಟಗಿ, ಇಜೇರಿ, ಅಂದೋಲಾ, ಯಡ್ರಾಮಿ ಪಟ್ಟಣದಲ್ಲಿ ಮಳೆಯಾಗಿದೆ.

ಮಂಗಳೂರಿನಲ್ಲಿ ಉತ್ತಮ ಮಳೆ: (ಮಂಗಳೂರು) ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಜಯಪುರ ಸುತ್ತಮುತ್ತ ಗುರುವಾರ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ, ಬೆಳ್ತಂಗಡಿ ಪ್ರದೇಶಗಳಲ್ಲಿ ಗುರುವಾರ ಸಂಜೆ ಉತ್ತಮ ಮಳೆಯಾಗಿದೆ. ಉಜಿರೆಯಲ್ಲಿ ಗುಡುಗು, ಮಿಂಚು ಸಹಿತ 1 ಗಂಟೆ ಮಳೆ ಸುರಿಯಿತು. ಸುಬ್ರಹ್ಮಣ್ಯದಲ್ಲಿ ಮಧ್ಯಾಹ್ನ ನಂತರ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗಿದೆ. ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರು ಔಷಧ ಸಿಂಪಡಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಮಳೆ ಬಿಡುವು ನೀಡುವುದನ್ನು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.