ADVERTISEMENT

ರಾಜ್ಯೋತ್ಸವ ಪ್ರಶಸ್ತಿ: ಅರ್ಜಿ ಕರೆಯದೇ ಅರ್ಹರ ಆರಿಸಿ

ಸಾಣೇಹಳ್ಳಿ:ರಾಷ್ಟ್ರೀಯ ನಾಟಕೋತ್ಸವದಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 20:33 IST
Last Updated 9 ನವೆಂಬರ್ 2018, 20:33 IST
ರಾಷ್ಟ್ರೀಯ ನಾಟಕೋತ್ಸವದ ಸಮಾರೋಪಕ್ಕೆ ಆಗಮಿಸಿದ್ದ ಜನಸ್ತೋಮ.
ರಾಷ್ಟ್ರೀಯ ನಾಟಕೋತ್ಸವದ ಸಮಾರೋಪಕ್ಕೆ ಆಗಮಿಸಿದ್ದ ಜನಸ್ತೋಮ.   

ಹೊಸದುರ್ಗ: ಅರ್ಜಿ ಕರೆಯದೇ ಮುಂದಿನ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು. ಪ್ರಶಸ್ತಿಗೆ ಅರ್ಜಿ ಸಲ್ಲಿಸಿದವರನ್ನು ಅನರ್ಹಗೊಳಿಸಬೇಕು. ಒಂದು ಸಮಿತಿ ರಚಿಸಿ, ಯೋಗ್ಯರನ್ನು ಆಯ್ಕೆ ಮಾಡಿ, ಪ್ರಶಸ್ತಿ ನೀಡಿದಲ್ಲಿ ಅದಕ್ಕೆ ಗೌರವ ಸಿಗುತ್ತದೆ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸಾಣೇಹಳ್ಳಿಯಲ್ಲಿ ಶುಕ್ರವಾರ ಸಂಜೆ ನಡೆದ ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಹಾಗೂ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.

‘ನಮ್ಮ ರಾಜ್ಯದಲ್ಲಿ ಅನೇಕ ಪ್ರಶಸ್ತಿಗಳಿವೆ. ಆದರೆ, ದೇಶದಲ್ಲಿಯೇ ಯಾರಿಂದಲೂ ಅರ್ಜಿ ಕರೆಯದೇ ‘ಶ್ರೀ ಶಿವಕುಮಾರ ಪ್ರಶಸ್ತಿ’ ನೀಡುತ್ತಿರುವುದು ಸಾಣೇಹಳ್ಳಿ ಶ್ರೀಮಠದ ವಿಶೇಷ. ಉದ್ಯೋಗಕ್ಕಾಗಿ ಅರ್ಜಿ ಹಾಕುವುದರಲ್ಲಿ ತಪ್ಪಿಲ್ಲ. ಆದರೆ, ಯಾವುದೋ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವುದು ಸರಿಯಲ್ಲ. ಇದು ಅಸಹ್ಯಕರ ಬೆಳವಣಿಗೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

**

ರೈತರ ಬೆನ್ನು ಮುರಿದ ಸರ್ಕಾರ

ರೈತರ ಹಿತ ಕಾಪಾಡಬೇಕಾದ ಸರ್ಕಾರಗಳು, ಅವರ ಬೆನ್ನು ಮುರಿಯುವ ಕೆಲಸ ಮಾಡುತ್ತಿವೆ. ಕೃಷಿಕರಿಗೆ ನೀರು, ವಿದ್ಯುತ್‌, ಬೆಳೆಗೆ ಬೆಂಬಲ ಬೆಲೆ ನೀಡಿದರೆ, ಸಾಲಮನ್ನಾ ಮಾಡಿ ಎಂದು ರೈತರು ಕೇಳುವುದಿಲ್ಲ. ಹಾಗಾಗಿ ಸರ್ಕಾರಗಳು ಕೆರೆಗಳನ್ನು ತುಂಬಿಸುವ ಹೊಣೆಗಾರಿಕೆ ಮೊದಲು ಮಾಡಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗಿ, ಕೃಷಿ ಚಟುವಟಿಕೆ ಅಭಿವೃದ್ಧಿಯಾಗುತ್ತದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

**

ಸಭೆಯಲ್ಲಿ ಸಂತಾಪ

ಈ ಬಾರಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಎರಡನೇ ದಿನ ಪ್ರದರ್ಶನಗೊಂಡ ನರಬಲಿ ನಾಟಕ ರಚನೆಕಾರ ಜ ಹೊ ನಾರಾಯಣಸ್ವಾಮಿ ನಿಧನಕ್ಕೆ, ವೇದಿಕೆ ಮೇಲಿದ್ದ ಗಣ್ಯರು ಹಾಗೂ ಸಭಿಕರು ಎದ್ದು ನಿಂತು ಸಂತಾಪ ಸೂಚಿಸಿದರು.

**

ಕನ್ನಡ ಸಾಹಿತ್ಯಕ್ಕೆ ವಿಶೇಷ ರೂಪ ತಂದುಕೊಟ್ಟ, ಶರಣ ಬಸವಣ್ಣನವರ ಹೆಸರಿನಲ್ಲಿ ಕನ್ನಡ ಉತ್ಸವ ಮಾಡಬೇಕು. ಕನ್ನಡ ರಾಜ್ಯೋತ್ಸವದಿಂದ ಏನೂ ಉಪಯೋಗವಿಲ್ಲ.
–ಶ್ರೀನಿವಾಸ್‌ ಜಿ.ಕಪ್ಪಣ್ಣ, ರಂಗ ಸಂಘಟಕ.

**

ನಮ್ಮ ಪಕ್ಷದ 104 ಮಂದಿ ಶಾಸಕರು ವಿರೋಧ ಪಕ್ಷದಲ್ಲಿಯೇ ಕುಳಿತು ಜನಪರವಾಗಿ ಕರ್ತವ್ಯ ನಿರ್ವಹಿಸಬೇಕು. ಶ್ರೀಸಾಮಾನ್ಯನ ಸಮಸ್ಯೆಗೆ ಸ್ಪಂದಿಸಬೇಕು.
–ಬಿ.ಎಸ್‌.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.