ಬೆಂಗಳೂರು: ‘ಆತ್ಮಸಾಕ್ಷಿಯಂತೆ ನಡೆದುಕೊಳ್ಳುವುದು ಹಾಗೂ ಮುಗ್ಧತೆಯನ್ನು ಉಳಿಸಿಕೊಳ್ಳುವುದು ಜೀವನದಲ್ಲಿ ಕಷ್ಟ. ಯಾರು ಇವೆರಡನ್ನೂ ಕಾಪಾಡಿಕೊಳ್ಳುತ್ತಾರೆಯೋ ಅವರು ಸಾಧನೆ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂರಮಣಶ್ರೀಪ್ರತಿಷ್ಠಾನ ಜಂಟಿಯಾಗಿ ನಗರದಲ್ಲಿ ಗುರುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿಬೇಲಿಮಠದ ಶಿವರುದ್ರ ಸ್ವಾಮೀಜಿ ಅವರಿಗೆ‘ರಮಣಶ್ರೀಶರಣ ಜೀವಮಾನ ಸಾಧಕ ಪ್ರಶಸ್ತಿ’ (₹ 50 ಸಾವಿರ ನಗದು) ಹಾಗೂ ಎಂಟು ಮಂದಿಗೆ‘ರಮಣಶ್ರೀ ಶರಣ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು.
‘ಯಾರಿಗೆ ತಮ್ಮ ಅಸ್ತಿತ್ವ ಜಾಗೃತ ಆಗಿರುತ್ತದೆಯೋ ಅವರು ಸದಾ ಕ್ರಿಯಾಶೀಲರಾಗಿರುತ್ತಾರೆ. ನಾವು ಸದಾ ಇತರರಿಗಾಗಿ ಬದುಕುತ್ತೇವೆ. ನಮ್ಮ ಬದುಕಿನ ಉದ್ದೇಶದ ಬಗ್ಗೆಯೂ ಚಿಂತನೆ ಮಾಡಿಕೊಳ್ಳಬೇಕು. ಆಗ ನಮ್ಮ ಬದುಕಿನ ದಿಕ್ಕು ಬದಲಾಗುತ್ತದೆ. ಲೌಕಿಕ ಸಾಧನೆ, ಹುದ್ದೆಗಳ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ. ನಮ್ಮ ಆತ್ಮಸಾಕ್ಷಿಯ ಅನುಗುಣವಾಗಿ ಸಾಗಿದರೆ ಪ್ರತಿಕ್ಷಣ ಅಮೃತ ಘಳಿಗೆ ಆಗಲಿದೆ’ ಎಂದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್, ‘ವಿಧಾನಸೌಧ ಕಟ್ಟಡದ ಮೇಲೆ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಬರೆಯಲಾಗಿದೆ. ಅದೇ ರೀತಿ, ಸುವರ್ಣ ಸೌಧದ ಮೇಲೆ ‘ಕಾಯಕವೇ ಕೈಲಾಸ’ ಎಂದು ಬರೆಸಬೇಕು. ಬಸವಣ್ಣ ಅವರ ಹೆಸರಿನಲ್ಲಿ ಥೀಮ್ ಪಾರ್ಕ್ ಸ್ಥಾಪಿಸಬೇಕು’ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದಶಿವರುದ್ರ ಸ್ವಾಮೀಜಿ, ‘ಸಾಹಿತ್ಯ, ಸಂಗೀತ ಸೇರಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಗೌರವಿಸುತ್ತಿರುವುದು ಶ್ಲಾಘನೀಯ’ ಎಂದರು.
ಷಡಕ್ಷರಿ ಅವರ ‘ಕ್ಷಣ ಹೊತ್ತು ಅಣಿಮುತ್ತು’ ಕೃತಿಯ ಭಾಗ 10 ಮತ್ತು ಭಾಗ 11ರ ಬಗ್ಗೆ ಮಾತನಾಡಿದ ಕನ್ನಡ ಪ್ರಭ ಪತ್ರಿಕೆಯ ಪ್ರಧಾನ ಸಂಪಾದಕ ರವಿ ಹೆಗಡೆ, ‘ಪುಸ್ತಕದಲ್ಲಿ ಅನುಭವದ ಜತೆಗೆ ನೀತಿಯನ್ನು ಹೇಳಲಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಕೃತಿಯ ರೂಪದಲ್ಲಿ ಹೊರತರಲಾಗಿದೆ. ಜ್ಞಾನ ಮತ್ತು ಚಿಂತನೆಯ ಹರವು ವಿಸ್ತರಿಸಿಕೊಳ್ಳಲು ಇದು ಸಹಕಾರಿ’ ಎಂದು ಹೇಳಿದರು.
8 ಮಂದಿಗೆ‘ರಮಣಶ್ರೀ ಶರಣ ಪ್ರಶಸ್ತಿ’
ಹುಬ್ಬಳ್ಳಿಯ ಬಿ.ವಿ. ಶಿರೂರ, ವಿಜಯಪುರದ ಫ.ಗು. ಸಿದ್ದಾಪುರ, ಬೆಂಗಳೂರಿನ ಮೃತ್ಯುಂಜಯ ದೊಡ್ಡವಾಡ ಹಾಗೂ ಬಾಗಲಕೋಟೆಯ ಇಳಕಲ್ನ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದಗುರು ಮಹಾಂತ ಸ್ವಾಮೀಜಿ ಅವರಿಗೆ ‘ರಮಣಶ್ರೀಶರಣ ಪ್ರಶಸ್ತಿ’ (ತಲಾ ₹ 40 ಸಾವಿರ) ಹಾಗೂ ಬೆಳಗಾವಿಯಕಾರಂಜಿ ಮಠದ ಶಿವಯೋಗಿ ದೇವರು, ಶಿವಮೊಗ್ಗದ ದಾಕ್ಷಾಯಿಣಿ ಜಯದೇವಪ್ಪ, ಬೆಂಗಳೂರಿನ ಸಿದ್ದರಾಮ ಕೇಸಾಪುರ ಹಾಗೂ ನಂಜನಗೂಡಿನ ವಿಶ್ವಬಸವ ಸೇನೆಯ ಬಸವ ಯೋಗೇಶ್ ಅವರಿಗೆ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ (ತಲಾ ₹ 20 ಸಾವಿರ) ಪ್ರದಾನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.