ADVERTISEMENT

ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಸ್ಪರ್ಧಿಸುವ ವ್ಯಕ್ತಿಗೆ ₹5 ಕೋಟಿ: ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 15:09 IST
Last Updated 29 ಡಿಸೆಂಬರ್ 2019, 15:09 IST
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ   

ಬೆಳಗಾವಿ: ‘ಶಾಸಕಿ‌ ಲಕ್ಷ್ಮಿ ಹೆಬ್ಬಾಳಕರ ಅವರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸುವ ಮರಾಠಾ ಸಮುದಾಯದ ವ್ಯಕ್ತಿಗೆ ₹ 5 ಕೋಟಿ ಹಣ ನೀಡುತ್ತೇನೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಘೋಷಿಸಿದರು.

ತಾಲ್ಲೂಕಿನ ನಾವಗೆಯ ಗಣೇಶ ಬಾಗ ತೋಟದ ಆವರಣದಲ್ಲಿ ಶ್ರೀ ಧನಂಜಯ ಜಾಧವ ಮಿತ್ರ ಪರಿವಾರ ವತಿಯಿಂದ ಭಾನುವಾರ ನಡೆದ 23ನೇ ವರ್ಷದ ಸ್ನೇಹ ಭೋಜನ‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಲಕ್ಷ್ಮಿ ಅವರನ್ನು ಗೆಲ್ಲಿಸುವ ಮೂಲಕ ನಾನೇ ದೊಡ್ಡ ತಪ್ಪು ಮಾಡಿದ್ದೇನೆ.‌ ಇನ್ನು ಮುಂದೆ ಕುಕ್ಕರ್ ಕೊಟ್ಟರೆ, ವೋಟಿಗೆ ಸಾವಿರ ರೂಪಾಯಿ ಕೊಟ್ಟರೆ ಮತ ಹಾಕಬಾರದು.‌ ಹಣ ನಿಮಗೆ ಎಷ್ಟು ಬೇಕು ಹೇಳಿ ನಾನು ಕೊಡುತ್ತೇನೆ’ ಎಂದರು.

ADVERTISEMENT

‘ಮುಂದಿನ ಚುನಾವಣೆಯಲ್ಲಿ ಮರಾಠಾ ಸಮುದಾಯದ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಲಾಗುವುದು.‌ ಈ ಕ್ಷೇತ್ರ ಮರಾಠಾ ಸಮುದಾಯದವರ ಕ್ಷೇತ್ರವಾಗಿದೆ. ಇದನ್ನು ಬಿಟ್ಟು ಕೊಡುವ ಮಾತೇ ಇಲ್ಲ.‌ ಮರಾಠಾ ಒಂದಾದರೆ ಇಲ್ಲಿ ಯಾವ ಶಕ್ತಿಯೂ ನಡೆಯುವುದಿಲ್ಲ. ಒಕ್ಕಟ್ಟಾಗಿ ಬಿಜೆಪಿಯನ್ನು ಗೆಲ್ಲಿಸಲು ಎಲ್ಲರೂ ಶ್ರಮಿಸಬೇಕು’ ಎಂದು ಹೇಳಿದರು.

ಶಾಸಕ ಅನಿಲ ಬೆನಕೆ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಇನ್ನು‌ ಮುಂದೆ ಕುಕ್ಕರ್ ಸೀಟಿ ಹೊಡೆಯುವುದಿಲ್ಲ.‌ ಇನ್ನು ಮುಂದೆ ಬಿಜೆಪಿಯವರು ಸೀಟಿ ಹೊಡೆಯುವ ಕಾಲ ಬರಲಿದೆ. ಹೀಗಾಗಿ ಎಲ್ಲರೂ ಒಕ್ಕಟ್ಟಾಗಿ ಇನ್ನು ಮುಂದೆ ಬಿಜೆಪಿ ಗೆಲುವಿಗೆ ಶ್ರಮಿಸಬೇಕು ಎಂದರು.

ಸವದತ್ತಿ ಶಾಸಕ ಆನಂದ‌ ಮಾಮನಿ, ಬಿಜೆಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧನಂಜಯ ಜಾಧವ, ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ, ಬಿಜೆಪಿ ವಿಭಾಗ ಪ್ರಭಾರಿ ಈರಣ್ಣ ಕಡಾಡಿ, ಖಾನಾಪುರ ಮಂಡಳ‌ ಅಧ್ಯಕ್ಷ ಸಂಜಯ ಕುಬಲ, ಬಿಜೆಪಿ ಮುಖಂಡ ಶಿವಾಜಿ ಸುಂಠಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ, ಅರಭಾಂವಿ ಮಾಜಿ ಮಂಡಳ ಅಧ್ಯಕ್ಷ ಸುಭಾಷ ಪಾಟೀಲ, ಉಮೇಶ ಕುರಿ, ರಾಜು ದೇಸಾಯಿ, ಪಂಕಜ ಘಾಡಿ, ನಾಗೋಜಿ ಮುತಗೇಕರ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.