ಬೆಂಗಳೂರು: ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರದ ನಿವಾಸದ ಪಕ್ಕದಲ್ಲೇ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮನೆ ಖರೀದಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ನಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಡಿದೆದ್ದು ಪಕ್ಷ ಬಿಟ್ಟು ಬಿಜೆಪಿ ಸೇರಿದ ರಮೇಶ ಜಾರಕಿಹೊಳಿ ಅವರು ಶಿವಕುಮಾರ್ ನಿರ್ವಹಿಸುತ್ತಿದ್ದ ಜಲಸಂಪನ್ಮೂಲ ಖಾತೆಗೆ ಪಟ್ಟು ಹಿಡಿದು ಪಡೆಯುವಲ್ಲಿ ಯಶಸ್ವಿಯಾದರು. ಬಳಿಕ ಶಿವಕುಮಾರ್ ವಾಸ್ತವ್ಯವಿದ್ದ ಸರ್ಕಾರಿ ಬಂಗಲೆಗೂ ಬೇಡಿಕೆ ಇಟ್ಟಿದ್ದರು.
ಇದೀಗ ಶಿವಕುಮಾರ್ ಪಕ್ಕದ ಮನೆಯನ್ನೇ ಖರೀದಿಸಿ ಪೂಜೆ ಮತ್ತು ಹೋಮಗಳನ್ನೂ ಮಾಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಡು ನೀರಲ್ಲಿ ಕೈಬಿಡಬೇಡಿ:‘ಎಚ್.ವಿಶ್ವನಾಥ್ ಅವರನ್ನು ನಡು ನೀರಿನಲ್ಲಿ ಕೈಬಿಡಬೇಡಿ’ ಎಂದು ಮಾಜಿ ಸಚಿವ ಆರ್.ಶಂಕರ್ ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದಾರೆ. ‘ವಿಶ್ವನಾಥ್ ಅವರು ನನ್ನ ರಾಜಕೀಯ ಗುರುಗಳು. ಜೆಡಿಎಸ್ ಬಿಟ್ಟು ಹೊರಬಂದಾಗಲೇ ಬಿಜೆಪಿ ಸರ್ಕಾರದ ರಚನೆಗೆ ಶಕ್ತಿ ಬಂದಿದ್ದು. ಅವರಿಗೆ ವಯಸ್ಸಾಗಿದೆ, ಅವಕಾಶಗಳೂ ಕಡಿಮೆ. ಪರಿಷತ್ತಿಗೆ ನಾಮ ನಿರ್ದೇಶನ ಮಾಡಲು ಅವಕಾಶವಿದೆ’ ಎಂದು ಆರ್. ಶಂಕರ್ ಅವರು ಸುದ್ದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.