ಬೆಂಗಳೂರು: ಕೋರಮಂಗಲದ ಒಂದನೇ ಹಂತದಲ್ಲಿ ವಾಸವಿದ್ದ ತೃತೀಯ ಲಿಂಗಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಗ್ಗೆ ದೂರು ದಾಖಲಾಗಿದ್ದು, ಆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
‘ಜಕ್ಕಸಂದ್ರ ಎಕ್ಸ್ಟೆನ್ಶನ್ನ ಎಂ.ಎಲ್. ರಾಕೇಶ್ (22), ಸೂರ್ಯ (22) ಹಾಗೂ ಎಂ. ಮಣಿಕಂಠ (21) ಬಂಧಿತರು. ಮೇ 12ರಂದು ನಡೆದಿರುವ ಘಟನೆ ಸಂಬಂಧ ಮೇ 17ರಂದು ಸಂತ್ರಸ್ತೆ ದೂರು ನೀಡಿದ್ದರು. ಅದಾಗಿ 24 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಲಾಗಿದ್ದು, ಸದ್ಯ ಅವರೆಲ್ಲ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಇಶಾ ಪಂತ್ ತಿಳಿಸಿದರು.
ಆಗಿದ್ದೇನು? ‘ದಕ್ಷಿಣ ಭಾರತದವರಾದ ಸಂತ್ರಸ್ತೆ, ಬ್ಯೂಟಿಷಿಯನ್ ಆಗಿದ್ದಾರೆ. ಸ್ನೇಹಿತೆಯ ಜೊತೆ ಕೋರಮಂಗಲದಲ್ಲಿ ವಾಸವಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಟ್ಯಾಟೂ ಮಳಿಗೆ ಇಟ್ಟುಕೊಂಡಿರುವ ಆರೋಪಿ ರಾಕೇಶ್ನಿಗೆ ಕೆಲ ತಿಂಗಳ ಹಿಂದಷ್ಟೇ ಸಂತ್ರಸ್ತೆಯ ಪರಿಚಯವಾಗಿತ್ತು. ಇಬ್ಬರೂ ಸ್ನೇಹಿತರಾಗಿದ್ದರು. ಆಗಾಗ ಮನೆಗೂ ಆತ ಹೋಗಿ ಬರುತ್ತಿದ್ದ. ಸಲುಗೆಯೂ ಬೆಳೆದಿತ್ತು.’
‘ಸಂತ್ರಸ್ತೆಯ ಮನೆಗೆ ಹೋಗಿದ್ದ ರಾಕೇಶ್ ಹಾಗೂ ಆತನ ಸಹಚರರು, ಅಸಭ್ಯವಾಗಿ ವರ್ತಿಸಿದ್ದರು. ಸಂತ್ರಸ್ತೆಯನ್ನು ಕೊಠಡಿಗೆ ಎಳೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಅದನ್ನು ಪ್ರಶ್ನಿಸಿದ್ದ ಸಂತ್ರಸ್ತೆಯ ಸ್ನೇಹಿತೆಗೆ ಚಾಕು ತೋರಿಸಿ ಬೆದರಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ಘಟನೆಯಿಂದ ನೊಂದ ಸಂತ್ರಸ್ತೆ, ತನ್ನ ಸ್ನೇಹಿತೆಯರಿಗೆ ವಿಷಯ ತಿಳಿಸಿದ್ದರು. ಅವರ ಸಹಾಯದಿಂದಲೇ ಠಾಣೆಗೆ ಬಂದು ದೂರು ನೀಡಿದ್ದರು’ ಎಂದರು.
ಸ್ನೇಹಿತೆ ಮೇಲೂ ಅತ್ಯಾಚಾರ: ‘ಸಂತ್ರಸ್ತೆಯ ಸ್ನೇಹಿತೆಯ ಮೇಲೂ ಆರೋಪಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಆ ಬಗ್ಗೆ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಅದನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.