ADVERTISEMENT

ಸುಂಟಿಕೊಪ್ಪಕ್ಕೂ ಅಂಬಿ ನಂಟು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2018, 20:09 IST
Last Updated 25 ನವೆಂಬರ್ 2018, 20:09 IST
ಸುಂಟಿಕೊಪ್ಪದ ಬೆಟ್ಟಗೇರಿ ತೋಟದಲ್ಲಿ ಪತ್ನಿ ಸುಮಲತಾ, ವಿಷ್ಣುವರ್ಧನ್‌ ಜೊತೆ ಅಂಬರೀಷ್‌
ಸುಂಟಿಕೊಪ್ಪದ ಬೆಟ್ಟಗೇರಿ ತೋಟದಲ್ಲಿ ಪತ್ನಿ ಸುಮಲತಾ, ವಿಷ್ಣುವರ್ಧನ್‌ ಜೊತೆ ಅಂಬರೀಷ್‌   

ಸುಂಟಿಕೊಪ್ಪ: ನಟ ಅಂಬರೀಷ್‌ ಅವರಿಗೂ ಸುಂಟಿಕೊಪ್ಪಕ್ಕೂ ನಿಕಟ ಸಂಬಂಧ.

ರಾಜಕೀಯ ಮತ್ತು ಚಿತ್ರರಂಗದ ಜಂಜಾಟದ ನಡುವೆ ಸಮಯ ಮೀಸಲಿಡಲು ಸುಂಟಿಕೊಪ್ಪದ ಬೆಟ್ಟಗೇರಿ ತೋಟದ ಮಾಲೀಕ, ಆತ್ಮೀಯ ವಿನೋದ್ ಶಿವಪ್ಪ ಅವರ ಮನೆಗೆ ಆಗಾಗ್ಗೆ ಬರುತ್ತಿದ್ದರು. ಇವರಿಬ್ಬರದು ಬಹುವರ್ಷಗಳ ಗೆಳೆತನ.

‘ವಿಷ್ಣುವರ್ಧನ್ ಹಾಗೂ ಅಂಬರೀಷ್‌ ಬೆಟ್ಟಗೇರಿ ತೋಟದ ನಮ್ಮ ಮನೆಗೆ ಬಂದು ಐದಾರು ದಿನ ವಿಶ್ರಾಂತಿ ಪಡೆಯುತ್ತಿದ್ದರು. ಹೀಗೆ, ವರ್ಷಕ್ಕೆ ಐದಾರು ಬಾರಿಯಾದರೂ ಬರುತ್ತಿದ್ದರು’ ಎನ್ನುತ್ತಾರೆ ವಿನೋದ್ ಶಿವಪ್ಪ.

ADVERTISEMENT

ವಿಷ್ಣುವರ್ಧನ್ ಅವರ ನಿಧನದ ಬಳಿಕವೂ ಅಂಬರೀಷ್‌ ಬಂದು ಹೋಗುತ್ತಿದ್ದರು. ಕೊಡಗಿನ ತಮ್ಮ ಸ್ನೇಹಿತರನ್ನು ಕರೆಯಿಸಿ ಜತೆಯಲ್ಲೇ ಊಟ ಮಾಡಿ, ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿ ಅವರೊಂದಿಗೆ ಹರಟೆ ಹೊಡೆದು ವಾಪಸಾಗುತ್ತಿದ್ದರು. ಅವರು ಬಂದು ಹೋಗುವುದು ಯಾರಿಗೂ ಗೊತ್ತಾಗುತ್ತಿರಲಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ ತೋಟದ ವ್ಯವಸ್ಥಾಪಕ ಚಂಗಪ್ಪ.

‘ನಮ್ಮ ಸಾಹುಕಾರರ ಮನೆಗೆ ಬರುವ ಅಂಬಿ ಅಣ್ಣ ನಮ್ಮೊಂದಿಗೆ ತಮಾಷೆ ಮಾಡುತ್ತಾ, ಬೈಯುತ್ತಾ ಕಾಲ ಕಳೆಯುತ್ತಿದ್ದರು. ನಾವು ಕಾರ್ಮಿಕರು ಅನ್ನುವ ಭೇದವಿಲ್ಲದೆ ನಮ್ಮೊಂದಿಗಿದ್ದು ಸಂತೋಷಪಡುತ್ತಿದ್ದರು. ನಾವಿಂದು ನತದೃಷ್ಟರು’ ಎನ್ನುತ್ತಾರೆ ಕಾರ್ಮಿಕ ದೇಜು.

ಮಣ್ಣಿನ ದೋಣಿ ಸಿನಿಮಾ ಚಿತ್ರೀಕರಣ ನಮ್ಮ ತೋಟದಲ್ಲಿಯೇ ನಡೆಯಿತು ಎಂದು ನೆನಪಿಸಿಕೊಳ್ಳುತ್ತಾ, ಅಂಬಿ ಅಣ್ಣ, ವಿಷ್ಣುವರ್ಧನ್, ರಜನಿಕಾಂತ್ ಆಗಾಗ್ಗೆ ಬರುತ್ತಿದ್ದರು. ಅವರಲ್ಲಿ ಇಬ್ಬರು ನಮ್ಮ ಮುಂದೆ ಈಗ ಇಲ್ಲ ಎಂದು ಹೇಳಿದ್ದು ತೋಟದ ಕಾರ್ಮಿಕ ಶಿವಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.