ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಗಲಭೆ ಸೃಷ್ಟಿಸಲೆಂದೇ ಕಾಂಗ್ರೆಸ್ ಪಕ್ಷ ನಾಲ್ಕು ಸಾವಿರಕ್ಕೂ ಹೆಚ್ಚು ಜನರನ್ನು ಹೊರಗಿನಿಂದ ಆರ್.ಆರ್.ನಗರಕ್ಕೆ ಕರೆತಂದಿದೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಆರೋಪಿಸಿದ್ದಾರೆ.
‘ನಕಲಿ ಗುರುತಿನ ಚೀಟಿಯನ್ನು ಸೃಷ್ಟಿಸಿ ಜನರಲ್ಲಿ ಗೊಂದಲ ಮೂಡಿಸುವ ಕಾರ್ಯಕ್ಕೂ ಕೈಹಾಕಿದ್ದಾರೆ. ಈ ಮೂಲಕ ನನ್ನ ಮೇಲೆ ಆರೋಪ ಹೊರಿಸಿ, ಕಾಂಗ್ರೆಸ್ನವರು ಅನುಕಂಪ ಗಿಟ್ಟಿಸಲು ಸಂಚು ನಡೆಸಿದ್ದಾರೆ’ ಎಂದು ಅವರು ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ಪ್ರಜ್ಞಾವಂತರು, ಬುದ್ಧಿವಂತರು ಮತ್ತು ಸುಶಿಕ್ಷಿತರು ಇರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಷಡ್ಯಂತ್ರ ರೂಪಿಸುತ್ತಿದೆ. ಅಕ್ರಮಗಳನ್ನು ನಡೆಸಿ ಅದನ್ನು ನಮ್ಮ ತಲೆಗೆಕಟ್ಟಿ ತಾವು ಒಳ್ಳೆಯವರು, ಬಿಜೆಪಿಯವರು ಕೆಟ್ಟವರು ಎಂದು ಬಿಂಬಿಸಿ ಅನುಕಂಪದ ಮತಗಳನ್ನು ಗಿಟ್ಟಿಸಲು ಕುತಂತ್ರ ಮಾಡಿದ್ದಾರೆ’ ಎಂದು ಹರಿಹಾಯ್ದರು.
ಕಂದಾಯ ಸಚಿವ ಆರ್.ಅಶೋಕ ಮಾತನಾಡಿ, ಕಾಂಗ್ರೆಸ್ ಮುಖಂಡರು ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಚುನಾವಣಾ ಗುರುತಿನ ಚೀಟಿಗಳ ಮಾಹಿತಿ ಮತ್ತು ಗುರುತಿನ ಚೀಟಿ ಸಂಖ್ಯೆಯನ್ನು ಸಂಗ್ರಹಿಸುತ್ತಿರುವುದು ಯಾವ ಕಾರಣಕ್ಕೆ? ಈ ರೀತಿ ವಿವರ ಸಂಗ್ರಹಿಸುವುದು ಅಪರಾಧ ಎಂದು ಚುನಾವಣಾ ಆಯೋಗ ಈಗಾಗಲೇ ತಿಳಿಸಿದೆ. ಮತದಾರರು ಯಾವುದೇ ಕಾರಣಕ್ಕೂ ಮಾಹಿತಿ ನೀಡಬಾರದು ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.