ADVERTISEMENT

ಎಡನೀರು ಮಠದ ಉತ್ತರಾಧಿಕಾರಿ ನೇಮಕ: ಸಚ್ಚಿದಾನಂದ ಭಾರತಿ ನಾಮಕರಣ

ಎಡನೀರು ಮಠದ ಉತ್ತರಾಧಿಕಾರಿ ನೇಮಕ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 17:49 IST
Last Updated 7 ಸೆಪ್ಟೆಂಬರ್ 2020, 17:49 IST
ಕೇಶವಾನಂದ ಭಾರತಿ ಸ್ವಾಮೀಜಿ ವೃಂದಾವನಕ್ಕೆ ಪೂಜೆ ಸಲ್ಲಿಸಿದ ಉತ್ತರಾಧಿಕಾರಿ ಸಚ್ಚಿದಾನಂದ ಭಾರತಿ
ಕೇಶವಾನಂದ ಭಾರತಿ ಸ್ವಾಮೀಜಿ ವೃಂದಾವನಕ್ಕೆ ಪೂಜೆ ಸಲ್ಲಿಸಿದ ಉತ್ತರಾಧಿಕಾರಿ ಸಚ್ಚಿದಾನಂದ ಭಾರತಿ   

ಮಂಗಳೂರು: ಕಾಸರಗೋಡಿನ ಎಡನೀರು ಮಠದ ಉತ್ತರಾಧಿಕಾರಿಯಾಗಿ ಜಯರಾಮ್‌ ಮಂಜಿತ್ತಾಯ ಅವರನ್ನು ಆಯ್ಕೆ ಮಾಡಲಾಗಿದ್ದು, ಸಚ್ಚಿದಾನಂದ ಭಾರತಿ ಸ್ವಾಮೀಜಿ ಎಂದು ನಾಮಕರಣ ಮಾಡಲಾಗಿದೆ. ಇದೇ 28 ರಂದು ಅಧಿಕೃತ ಘೋಷಣೆ ಮಾಡಿ, ಪೀಠಾರೋಹಣ ಸಮಾರಂಭ ನಡೆಸಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ.

50 ವರ್ಷದ ಜಯರಾಮ್‌ ಮಂಜಿತ್ತಾಯ ಅವರು, ಕೇಶವಾನಂದ ಭಾರತಿ ಸ್ವಾಮೀಜಿ ಅವರ ಪೂರ್ವಾಶ್ರಮದ ಸಹೋದರಿ ಸಾವಿತ್ರಿ ಮತ್ತು ನಾರಾಯಣ ಕೆದಿಲಾಯ ದಂಪತಿಯ ಪುತ್ರರು. ಕೇಶವಾನಂದ ಭಾರತಿ ಅವರ ತಾಯಿ, ಎಳೆಯ ವಯಸ್ಸಿನಲ್ಲಿಯೇ ಜಯರಾಮ್‌ ಅವರನ್ನು ದತ್ತು ತೆಗೆದುಕೊಂಡು, ಮಂಜಿತ್ತಾಯ ಕುಟುಂಬಕ್ಕೆ ಸೇರಿಸಿದ್ದರು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದಿರುವ ಜಯರಾಮ್‌ ಅವರು, ಒಂದು ದಶಕದಿಂದ ಎಡನೀರು ಮಠದ ಆಡಳಿತಾಧಿಕಾರಿಯಾಗಿ ಸಂಪೂರ್ಣ ಉಸ್ತುವಾರಿ ಕಾರ್ಯ ನಿರ್ವಹಿಸುತ್ತಿದ್ದರು.

ಕಾಮಠ, ಕೆದಿಲಾಯ, ಕಕ್ಕಿಲಾಯ, ಮಂಜಿತ್ತಾಯ, ಕುಣುಕುಲ್ಲಾ, ಎರ್ನೂರಾಯ ಶಿವಳ್ಳಿ ಮನೆತನಗಳ ಹಿರಿಯರು ಸಭೆ ಸೇರಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದರು. ಮಂಜಿತ್ತಾಯ ಕುಟುಂಬದವರೇ ಮಠಾಧೀಶರಾಗುವುದು ಎಡನೀರು ಮಠದ ಪರಂಪರೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.