ADVERTISEMENT

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ‘ಮರಳು ಮಾಫಿಯಾ’

ಸರ್ಕಾರದ ವಿರುದ್ಧ ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 20:07 IST
Last Updated 3 ಜುಲೈ 2018, 20:07 IST

ಬೆಂಗಳೂರು: ‘ಮರಳು ಮಾಫಿಯಾದಲ್ಲಿ ರಾಜ್ಯ ಸರ್ಕಾರವೇ ಭಾಗಿಯಾಗಿದೆ’ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದಾಗ, ಸ್ವಪಕ್ಷೀಯ ಸದಸ್ಯರೂ ಧ್ವನಿಗೂಡಿಸಿದರು.

‘ಮರಳು ಅಕ್ರಮ ಸಾಗಣೆಯಿಂದ ಕೆರೆ ಪಾತ್ರ, ನದಿ ದಂಡೆ ಸಂಪೂರ್ಣ ಬರಿದಾಗಿದೆ. ಶಿರಾ, ಹೊಸದುರ್ಗ, ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಈ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಪಾಪದಲ್ಲಿ ರಾಜಕೀಯ ಮಾಡುತ್ತಿದ್ದೀರಿ. ತಕ್ಷಣ ಕ್ರಮ ತೆಗೆದುಕೊಳ್ಳಿ’ ಎಂದು ಸರ್ಕಾರದ ವಿರುದ್ಧ ಬಿಜೆಪಿಯ ಮಾಧುಸ್ವಾಮಿ ಆಗ್ರಹಿಸಿದರು. ಅಕ್ರಮ ಮರಳು ಸಾಗಣೆದಾರರು ಉಡುಪಿಯಲ್ಲಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಘಟನೆಯನ್ನು ಕೆ.ಎಸ್‌. ಈಶ್ವರಪ್ಪ ನೆನಪಿಸಿದರು.

‘ಅದಿರು ಅಕ್ರಮ ಸಾಗಣೆಗಿಂತ ದೊಡ್ಡ ಪ್ರಮಾಣದಲ್ಲಿ ಮರಳು ಸಾಗಣೆ ನಡೆಯುತ್ತಿದೆ’ ಎಂದು ಗೂಳಿಹಟ್ಟಿ ಶೇಖರ್‌ ದೂರಿದರೆ, ‘ಮರಳು ದಂಧೆಗೆ ಕಡಿವಾಣ ಹಾಕಬೇಕು’ ಎಂದು ಅರಗ ಜ್ಞಾನೇಂದ್ರ ಒತ್ತಾಯಿಸಿದರು.

ADVERTISEMENT

ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ‘ನಾವು ಬಿಗಿಯಾಗಿದ್ದರೆ ಇಂಥ ವ್ಯವಸ್ಥೆಯನ್ನು ಸರಿಮಾಡಲು ಸಾಧ್ಯ. ಇದಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.