ಬೆಂಗಳೂರು/ಬೆಳಗಾವಿ: ಸಿ.ಡಿ ಪ್ರಕರಣದಲ್ಲಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಬಲಿಗರು ತಮ್ಮ ನಾಯಕರನ್ನು ಬೆಂಬಲಿಸಿ ಬೀದಿಗೆ ಇಳಿದಿದ್ದಾರೆ. ಬೆಳಗಾವಿಯಲ್ಲಿರುವ ಶಿವಕುಮಾರ್ ಮೇಲೆ ದಾಳಿಗೆ ಯತ್ನಿಸಿದ ರಮೇಶ ಅಭಿಮಾನಿಗಳು, ಕಾರಿನ ಮೇಲೆ ಚಪ್ಪಲಿ, ಕಲ್ಲು ತೂರಿದ್ದಾರೆ.
ಭಾನುವಾರವೂ ಸಿ.ಡಿ ವಿವಾದದ ಸುತ್ತ ಹಲವು ಘಟನಾವಳಿಗಳು ನಡೆದವು. ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಸರಣಿ ಪ್ರತಿಭಟನೆಗಳ ಮೂಲಕ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಬೀದಿಗೆ ಇಳಿದರು. ಪರ–ವಿರೋಧದ ಹೇಳಿಕೆಗಳೂ ದಿನವಿಡೀ ಸದ್ದು ಮಾಡಿದವು.
ಕಾರಿಗೆ ಚಪ್ಪಲಿ ಎಸೆತ: ರಮೇಶ ವಿರುದ್ಧ ಸಿ.ಡಿ ರೂಪಿಸುವ ಸಂಚಿನಲ್ಲಿ ಭಾಗಿಯಾದ ಆರೋಪಕ್ಕೆ ಗುರಿಯಾಗಿರುವ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಪ್ರಯುಕ್ತ ಅಲ್ಲಿಗೆ ತೆರಳಿದ್ದು, ಶಿವಕುಮಾರ್ ಭೇಟಿ ವಿರೋಧಿಸಿ ಬೆಳಗಾವಿ ವಿಮಾನ ನಿಲ್ದಾಣದ ಸಮೀಪ ಮತ್ತು ರಮೇಶ ಅವರ ಸ್ವಕ್ಷೇತ್ರ ಗೋಕಾಕದಲ್ಲಿ ಭಾನುವಾರ ಬೃಹತ್ ಪ್ರತಿಭಟನೆಗಳು ನಡೆದವು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಳಿದ ಶಿವಕುಮಾರ್ ಅಲ್ಲಿಂದ ಪಕ್ಷದ ಸಭೆ ನಿಗದಿಯಾಗಿದ್ದ ಸ್ಥಳಕ್ಕೆ ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರಳುತ್ತಿದ್ದಾಗ ನೂರಾರು ಮಂದಿ ಕಪ್ಪು ಬಾವುಟ ಪ್ರದರ್ಶಿಸಿ, ಧಿಕ್ಕಾರ ಕೂಗಿದ್ದಾರೆ. ಪೊಲೀಸ್ ಭದ್ರತೆಯ ನಡುವೆಯೂ ವ್ಯಕ್ತಿ
ಯೊಬ್ಬ ಶಿವಕುಮಾರ್ ಇದ್ದ ಕಾರಿನ ಮೇಲೆ ಚಪ್ಪಲಿ ತೂರಿದ್ದಾನೆ. ಪ್ರತಿಭಟನಾಕಾರರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಶಿವ
ಕುಮಾರ್ ಬೆಂಬಲಿಗರ ಕಾರಿನ ಮೇಲೆ ಕಲ್ಲೆಸೆದಿದ್ದು, ಕಾರಿನ ಗಾಜು ಪುಡಿಯಾಗಿವೆ.
ರಮೇಶ ಅವರ ತಮ್ಮ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ ಜಾರಕಿಹೊಳಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸುತ್ತಿದ್ದಾರೆ. ಆ ಸಂದರ್ಭದಲ್ಲಿ ಜತೆಗಿರುವುದಕ್ಕಾಗಿ ಶಿವಕುಮಾರ್ ಬೆಳಗಾವಿಯಲ್ಲೇ ತಂಗಿದ್ದಾರೆ. ಇವರು ವಾಸ್ತವ್ಯ ಹೂಡಿರುವ ಹೋಟೆಲ್ಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
‘ಪ್ರತಿಭಟನೆಯ ಸ್ವಾಗತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಸ್ವಾಗತವೇ ನಮಗೆ ದೊಡ್ಡ ಶಕ್ತಿಯಾಗುತ್ತದೆ. ಎಲ್ಲವನ್ನೂ ನಾನು ಕ್ರೀಡಾಸ್ಫೂರ್ತಿಯಿಂದ ತೆಗೆದುಕೊಳ್ಳುತ್ತೇನೆ’ ಎಂದು ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಮುಂದುವರಿದ ಪ್ರತಿಭಟನೆ: ರಮೇಶ ಜಾರಕಿಹೊಳಿ ಬಂಧನಕ್ಕೆ ಆಗ್ರಹಿಸಿ ಬೆಂಗಳೂರಿನ ಸದಾಶಿವನಗರದ ಅವರ ಮನೆಯ ಎದುರು ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ತಡರಾತ್ರಿ ಪ್ರತಿಭಟನೆ ನಡೆಸಿದ್ದರು. ಭಾನುವಾರವೂ ಬೆಳಿಗ್ಗೆ ರಮೇಶ ಮನೆ ಎದುರು ಪ್ರತಿಭಟನೆ ನಡೆಸಿದ ‘ಕೈ’ ಪಡೆಯ ಸದಸ್ಯರು, ಬಂಧನಕ್ಕೆ ಒತ್ತಾಯಿಸಿದರು.
ಯುವ ಕಾಂಗ್ರೆಸ್ ಕಾರ್ಯಕರ್ತರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಎದುರಿನಲ್ಲೂ ಪ್ರತಿಭಟನೆ ನಡೆಸಿದರು. ಶಿವಕುಮಾರ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿರುವ ಆರೋಪದಡಿ ರಮೇಶ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸ್ ಠಾಣೆಗೆ ದೂರನ್ನೂ ಸಲ್ಲಿಸಿದರು.
ಕನಕಪುರಕ್ಕೆ ಬರಲು ಸವಾಲು: ಕನಕಪುರದಲ್ಲಿ ಶಿವಕುಮಾರ್ಗೆ ಸೋಲುಣಿಸುವ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡರೂ ಪಂಥಾಹ್ವಾನ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಡಿ.ಕೆ. ಸುರೇಶ್, ‘ರಮೇಶ ಜಾರಕಿಹೊಳಿ ಕನಕಪುರಕ್ಕಾದರೂ ಬರಲಿ, ಬೆಂಗಳೂರಿಗಾದರೂ ಬರಲಿ. ಬಂದಾಗ ನೋಡಿಕೊಂಡರಾಯಿತು’ ಎಂದರು.
ಕನಕಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿಧಾನ ಪರಿಷತ್ ಸದಸ್ಯ ಎಸ್. ರವಿ, ‘ರಮೇಶ ಜಾರಕಿಹೊಳಿಗೆ ತಾಕತ್ತಿ
ದ್ದರೆ ಕನಕಪುರಕ್ಕೆ ಬರಲಿ. ಸ್ವಾಭಿಮಾನಿ ಮಹಿಳೆಯರು ಪೊರಕೆ ಸೇವೆಯ ಸ್ವಾಗತ ನೀಡುತ್ತಾರೆ’ ಎಂದು ಸವಾಲು ಹಾಕಿದರು.
ಸಂತ್ರಸ್ತೆ ಇಂದು ನ್ಯಾಯಾಲಯಕ್ಕೆ?:
ರಮೇಶ ಜಾರಕಿಹೊಳಿ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿ ವಕೀಲರ ಮೂಲಕ ದೂರು ಸಲ್ಲಿಸಿರುವ ಸಂತ್ರಸ್ತ ಯುವತಿ ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಎದುರು ತನ್ನ ಹೇಳಿಕೆಯನ್ನು ದಾಖಲಿಸುವ
ಸಾಧ್ಯತೆ ಇದೆ.
ಯುವತಿಯನ್ನು ಕರೆತರುವಂತೆ ಎಸ್ಐಟಿ ಅಧಿಕಾರಿಗಳು ವಕೀಲ ಕೆ.ಎನ್. ಜಗದೀಶ್ ಕುಮಾರ್ ಅವರಿಗೆ ನೋಟಿಸ್ ನೀಡಿದ್ದರು. ಈ ಕುರಿತು ಫೇಸ್ಬುಕ್ ಲೈವ್ ಮೂಲಕ ಪ್ರತಿಕ್ರಿಯಿಸಿರುವ ವಕೀಲ, ‘ಸಂತ್ರಸ್ತೆಗೆ ತನಿಖಾಧಿಕಾರಿಗಳ ಮೇಲೆ ವಿಶ್ವಾಸವಿಲ್ಲ. ಆದ್ದರಿಂದ ಸೋಮವಾರ ನೇರವಾಗಿ ನ್ಯಾಯಾಧೀಶರ ಎದುರು ಹಾಜರಾಗಿ ಹೇಳಿಕೆ ನೀಡಲಿದ್ದಾರೆ’ ಎಂದು ತಿಳಿಸಿದ್ದಾರೆ.
ರಮೇಶಗೆ ಪೊಲೀಸರ ನೋಟಿಸ್: ಈ ಮಧ್ಯೆ ರಮೇಶ ಜಾರಕಿಹೊಳಿ ಅವರಿಗೆ ಪೊಲೀಸರು ಭಾನುವಾರ ಸಂಜೆ ನೋಟಿಸ್ ನೀಡಿದ್ದು, ಸೋಮವಾರ ಬೆಳಿಗ್ಗೆ 11 ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.
ಪೊಲೀಸ್ ಭದ್ರತೆಯಲ್ಲಿ ಕುಟುಂಬ:ಶನಿವಾರ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದ ಸಂತ್ರಸ್ತೆಯ ಕುಟುಂಬದ ಸದಸ್ಯರು ಪೊಲೀಸ್ ಭದ್ರತೆಯಲ್ಲಿ ಬೆಳಗಾವಿಗೆ ತೆರಳಿದ್ದಾರೆ. ಅಲ್ಲಿ ತಂಗಿರುವ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
‘ಬಿಜೆಪಿ ಪ್ರಾಯೋಜಿತ ಗೂಂಡಾಗಿರಿ’
‘ರಮೇಶ ಜಾರಕಿಹೊಳಿ ಅಭಿಮಾನಿಗಳೆಂದು ಹೇಳಿಕೊಂಡು ಡಿ.ಕೆ. ಶಿವಕುಮಾರ್ ಕಾರಿನ ಮೇಲೆ ಕಲ್ಲೆಸೆದು ಪುಂಡಾಟಿಕೆ ನಡೆಸಿರುವುದು ಖಂಡನೀಯ. ಇದು ಬಿಜೆಪಿ ಪ್ರಾಯೋಜಿತ ಗೂಂಡಾಗಿರಿ. ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಎಚ್ಚರ ಇರಲಿ’
ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ
***
‘ಜೆಡ್ ಪ್ಲಸ್ ಭದ್ರತೆ ಒದಗಿಸಿ’
‘ಎಸ್ಐಟಿಯಿಂದ ಸಂತ್ರಸ್ತೆಗೆ ನ್ಯಾಯ ದೊರಕುವ ನಂಬಿಕೆ ಇಲ್ಲ. ಯುವತಿಗೆ ಜೆಡ್ ಪ್ಲಸ್ ಭದ್ರತೆ ನೀಡಿ, ನ್ಯಾಯಾಧೀಶರ ಎದುರು ಹಾಜರುಪಡಿಸಬೇಕು. ಅಲ್ಲಿಯೇ ಹೇಳಿಕೆ ದಾಖಲಿಸಿಕೊಂಡು ನೊಂದ ಯುವತಿಗೆ ನ್ಯಾಯ ದೊರಕಿಸುವ ಕೆಲಸ ಮಾಡಬೇಕು’
ಪುಷ್ಪಾ ಅಮರನಾಥ್, ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ
***
‘ಸಿದ್ದರಾಮಯ್ಯಗೆ ನೆನಪಿನ ಶಕ್ತಿ ಕಡಿಮೆ’
‘ಸಿದ್ದರಾಮಯ್ಯ ಅವರಿಗೆ ನೆನಪಿನ ಶಕ್ತಿ ಕಡಿಮೆ. ಮೇಟಿ ಪ್ರಕರಣದಲ್ಲಿ ಸಿಐಡಿ ತನಿಖೆಗೆ ಒಪ್ಪಿಸಿ, ಪ್ರಕರಣವನ್ನೇ ಮುಚ್ಚಿ ಹಾಕಿದ್ದರು. ಮೇಟಿ ವಿರುದ್ಧ ಎಫ್ಐಆರ್ ದಾಖಲಿಸಿರಲಿಲ್ಲ. ಯುವತಿ ದೂರು ಕೊಟ್ಟ ತಕ್ಷಣ ನಾವು ಎಫ್ಐಆರ್ ದಾಖಲಿಸಿದ್ದೇವೆ. ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಯಾರೂ ಮಾಡಬಾರದು’
ಬಸವರಾಜ ಬೊಮ್ಮಾಯಿ,ಗೃಹ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.