ಬೆಂಗಳೂರು: ರಾಜ್ಯ ಸರ್ಕಾರದ ನೆರವು ಹಾಗೂ ಪ್ರೋತ್ಸಾಹಧನ ಪಡೆಯುವ ಸಂಸ್ಥೆಗಳು ಇನ್ನು ಮುಂದೆ ಹುದ್ದೆ ಖಾಲಿ ಇದ್ದಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ 100ರಷ್ಟು ಆದ್ಯತೆ ನೀಡಬೇಕು.
ಸರೋಜಿನಿ ಮಹಿಷಿ ವರದಿಗೆ ಕಾನೂನಿನ ಬಲ ನೀಡಲು ಗುರುವಾರ ನಡೆದ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಅದರ ಅನ್ವಯ ಈ ನಿಯಮ ಜಾರಿಗೆ ಬರಲಿದೆ. ‘ಇದು ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಅನ್ವಯವಾಗುವುದಿಲ್ಲ. ಸಂಸ್ಥೆಗಳು ಉದ್ಯೋಗ ನೀಡದಿದ್ದರೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ ದೂರು ಸಲ್ಲಿಸಬಹುದು. ಸಮಿತಿಯು ಸಂಸ್ಥೆಗೆ ನೋಟಿಸ್ ನೀಡಿ ಸೂಕ್ತ ಕ್ರಮ ಕೈಗೊಳ್ಳಲಿದೆ’ ಎಂದು ಸಚಿವ ಕೃಷ್ಣ ಬೈರೇಗೌಡ ಸುದ್ದಿಗಾರರಿಗೆ ತಿಳಿಸಿದರು.
ಪ್ರಮುಖ ನಿರ್ಧಾರಗಳು
* ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆ, ಮಂಡಳಿಗೆ ₹25 ಕೋಟಿ ಅನುದಾನ.
* ಪೊಲೀಸ್ ಇಲಾಖೆಯ ಎರಡು ಶ್ರೇಣಿಗಳಲ್ಲಿ ಶೇ 20ರಷ್ಟು ಇರುವ ಮಹಿಳಾ ಮೀಸಲಾತಿಯನ್ನು ಶೇ 25ಕ್ಕೆ ಏರಿಸಲಾಗುವುದು. ಇದನ್ನು ಏಳು ಶ್ರೇಣಿಗಳಿಗೆ ವಿಸ್ತರಿಸಲಾಗುತ್ತದೆ.
* ಅಂಗವಿಕಲ ಹಕ್ಕುಗಳ ಅಧಿನಿಯಮದ ಅಡಿಯಲ್ಲಿ ಈ ಹಿಂದೆ ಐದು ಅಂಗವಿಕಲತೆಗಳನ್ನು ಗುರುತಿಸಲಾಗಿತ್ತು. ಈಗ 21 ಅಂಗವಿಕಲತೆಗಳನ್ನು ಗುರುತಿಸಲಾಗಿದ್ದು, ಸರ್ಕಾರಿ, ಅನುದಾನಿತ ಸಂಸ್ಥೆಗಳಲ್ಲಿ ಕನಿಷ್ಠ ಶೇ 4 ಉದ್ಯೋಗ, ಸರ್ಕಾರದ ಸೌಲಭ್ಯಗಳಲ್ಲಿ ಶೇ 5 ಮೀಸಲಾತಿ ನೀಡಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.