ADVERTISEMENT

ಆಯ್ಕೆ ಸಮಿತಿ ಸದಸ್ಯೆ ನೇಮಕ ರದ್ದು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 17:35 IST
Last Updated 28 ಸೆಪ್ಟೆಂಬರ್ 2021, 17:35 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಬಾಲ ನ್ಯಾಯ ಕಾಯ್ದೆಯ ನಿಯಮಗಳ ಅಡಿಯಲ್ಲಿನ ರಾಜ್ಯ ಮಟ್ಟದ ಆಯ್ಕೆ ಸಮಿತಿಗೆ ಇಬ್ಬರು ಸದಸ್ಯರನ್ನು ನೇಮಕ ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್‌ ಬದಿಗಿರಿಸಿದೆ.

ವಕೀಲೆ ಸುಧಾ ಕಟ್ವಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ‘ನೇಮಕಗೊಂಡಿದ್ದ ವ್ಯಕ್ತಿಗಳಿಗೆ ಅನುಭವ ಹಾಗೂ ಅರ್ಹತೆಯ ಕೊರತೆಯಿದೆ’ ಎಂದು ಹೇಳಿದೆ.

ಸಚಿವರ ಆದೇಶದಂತೆ ಬಾಗಲಕೋಟೆಯ ಲತಾ ಜಗದೀಶ್‌ನಾರಾಯಣ ಮತ್ತು ಹುಬ್ಬಳ್ಳಿಯ ಎಸ್.ಎನ್. ಬಾದಸ್ಕರ್ ಅವರನ್ನು ನೇಮಿಸಲಾಗಿತ್ತು. ಆದರೆ, ಆ ಆದೇಶ ಪತ್ರಕ್ಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಹಿ ಮಾಡಿಲ್ಲ ಎಂಬುದನ್ನು ಪೀಠ ಗಮನಿಸಿತು.

ADVERTISEMENT

‘ಸದಸ್ಯರಾಗಿ ನೇಮಕಗೊಂಡವರು ದಾಖಲಿಸಿರುವ ಅನುಭವಗಳು ಬಾಲನ್ಯಾಯ ಕಾಯ್ದೆಯಲ್ಲಿನ ನಿಬಂಧನೆಗಳಿಗೆ ಅನುಗುಣವಾಗಿಲ್ಲ. ಲತಾ ಅವರು ಜಲ ಸಂವರ್ಧನೆ ಯೋಜನೆಯಡಿ ಕಾರ್ಯನಿರ್ವಹಿಸಿದ 7 ವರ್ಷಗಳ ಅನುಭವ ದಾಖಲಿಸಿದ್ದಾರೆ. ಬಾದಸ್ಕರ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದು ಮಕ್ಕಳ ಅಭಿವೃದ್ಧಿ ಅಥವಾ ಮಕ್ಕಳ ರಕ್ಷಣೆ ವಿಭಾಗದಲ್ಲಿ ಯಾವುದೇ ಅನುಭವ ಹೊಂದಿಲ್ಲ’ ಎಂದು ಪೀಠ ಅಭಿಪ್ರಾಯಟ್ಟಿತು.

‘ಸರ್ಕಾರದ ಈ ರೀತಿಯ ಕ್ರಮಗಳಿಂದ ಕಾಯ್ದೆಯ ಉದ್ದೇಶವೇ ವಿಫಲವಾಗಲಿದೆ. ಮಕ್ಕಳ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದವರು ಮತ್ತು ಬಾಲ ನ್ಯಾಯ ಕಾಯ್ದೆ 2015ರ ಪ್ರಕಾರ ನಿಗದಿಪಡಿಸಿರುವ ಅರ್ಹತೆ ಇರುವವರನ್ನೇ ನೇಮಿಸಬೇಕು’ ಎಂದು ಪೀಠ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.