ಮಂಡ್ಯ: ಜಿಲ್ಲೆಯ ವಿವಿಧೆಡೆ ಭಾನುವಾರ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಏಳು ಮಂದಿ ನೀರು ಪಾಲಾಗಿದ್ದಾರೆ.
ನಾಗಮಂಗಲ ತಾಲ್ಲೂಕಿನ ಬೋಗಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರನಹಳ್ಳಿ ಗ್ರಾಮದಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಗೀತಾ ನರಸಿಂಹಯ್ಯ (38) ಹಾಗೂ ಅವರ ಮಕ್ಕಳಾದ ಸವಿತಾ (19), ಸೌಮ್ಯಾ (14) ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.
ಚೋಳಸಂದ್ರ ಗ್ರಾಮದ ಗಂಗಾಧರಯ್ಯ ಅವರ ಪುತ್ರಿ ರಶ್ಮಿ (22) ಹಾಗೂ ಇಂಚರಾ (7) ಎಂಬ ಬಾಲಕಿ ಯಲಾದಹಳ್ಳಿ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಆಟವಾಡುತ್ತಿದ್ದ ಇಂಚರಾ ಕಾಲು ಜಾರಿ ಕೆರೆಗೆ ಬಿದ್ದಿದ್ದಾಳೆ. ಅವಳನ್ನು ರಕ್ಷಿಸಲು ರಶ್ಮಿ ಮುಂದಾಗಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ ಎಂಬುದು ಗೊತ್ತಾಗಿದೆ.
ಕಿಕ್ಕೇರಿ ಸಮೀಪದ ಹುಳಿ ಗಂಗನಹಳ್ಳಿ ಗ್ರಾಮದಲ್ಲಿ ಜಾನುವಾರು ಮೈತೊಳೆಯಲು ಹೋಗಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಮೃತರು ಗ್ರಾಮದ ಸ್ವಾಮಿಗೌಡರ ಪುತ್ರ ಅಭಿಷೇಕ್ (15) ಹಾಗೂ ಇವರ ಸೋದರ ಮಾವ ಆದಿಹಳ್ಳಿ ಗ್ರಾಮದ ಕುಮಾರ್ (25).ಕೊರಟಿಕೆರೆ ಗ್ರಾಮದ ಚನ್ನಕೇಶವ ಪ್ರೌಢಶಾಲೆ ವಿದ್ಯಾರ್ಥಿಯಾದ ಅಭಿಷೇಕ್, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.