ADVERTISEMENT

ಅಂಬರೀಷ್‌ ಟೀಕಿಸಿದ ಶಿವರಾಮೇಗೌಡ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 20:23 IST
Last Updated 29 ಅಕ್ಟೋಬರ್ 2018, 20:23 IST

ನಾಗಮಂಗಲ: ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ಅವರನ್ನು ಓಲೈಸುವ ಭರದಲ್ಲಿ ಲೋಕಸಭೆ ಉಪಚುನಾವಣೆ ಜೆಡಿಎಸ್‌ ಅಭ್ಯರ್ಥಿ ಎಲ್‌.ಆರ್‌.ಶಿವರಾಮೇಗೌಡ ಅವರು ಅಂಬರೀಷ್‌ ಅವರನ್ನು ಟೀಕಿಸಿದ್ದಾರೆ.

ಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌– ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

‘ಅವರನ್ನು ಸೋಲಿಸುವುದಕ್ಕಾಗಿಯೇ 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ನನಗೆ 1.50 ಲಕ್ಷ ಮತಗಳು ಬಂದವು. ಅವುಗಳಲ್ಲಿ ಬಹುತೇಕ ಮತ ಕಾಂಗ್ರೆಸ್‌ನಿಂದ ಬಂದಿದ್ದವು. ಇದರಿಂದ ಅವರು ಸೋತು, ಚಲುವರಾಯಸ್ವಾಮಿ ಗೆದ್ದರು’ ಎಂದು ಅಂಬರೀಷ್‌ ಹೆಸರು ಹೇಳದೆ ಟೀಕಿಸಿದರು.

ADVERTISEMENT

ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿದ್ದ ಶಿವರಾಮೇಗೌಡರು ‘ರಮ್ಯಾ ಅವರನ್ನು ಸೋಲಿಸಿದ್ದೇ ನಾನು’ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಹಾರಕ್ಕೆ ಕೊರಳೊಡ್ಡದ ಚಲುವರಾಯಸ್ವಾಮಿ: ಮುಖಂಡರಿಗೆ ಹಾಕಲು ಬೃಹತ್‌ ಹಾರ ತರಲಾಗಿತ್ತು. ಎಲ್ಲರನ್ನೂ ಸೇರಿಸಿ ಹಾರ ಹಾಕುವಾಗ ಚಲುವರಾಯಸ್ವಾಮಿ ಕೊರಳು ಒಡ್ಡಲಿಲ್ಲ. ಕಾರ್ಯಕರ್ತರಿಗೆ ಸಂಜ್ಞೆ ಮಾಡಿ ಬೇರೆಯವರಿಗೆ ಹಾಕುವಂತೆ ಕೈ ತೋರಿದರು. ಇದರಿಂದ, ಶಿವರಾಮೇಗೌಡ ಜತೆಗಿನ ಭಿನ್ನಾಭಿಪ್ರಾಯ ಕಡಿಮೆಯಾಗಿಲ್ಲ ಎಂಬುದು ಸ್ಪಷ್ಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.