ADVERTISEMENT

ಮಂಡ್ಯ: ವೈದ್ಯರ ಎದೆಯಲ್ಲಿ ಡವಡವ!

​ಪ್ರಜಾವಾಣಿ ವಾರ್ತೆ
Published 3 ಮೇ 2021, 11:16 IST
Last Updated 3 ಮೇ 2021, 11:16 IST

ಮಂಡ್ಯ: ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಯಾವುದೇ ಭಯವಿಲ್ಲ, ಆದರೆ ಆಮ್ಲಜನಕ ಪೂರೈಕೆಯಲ್ಲಿ ತಡವಾಗುತ್ತಿದ್ದರೆ ವೈದ್ಯರ ಎದೆಯಲ್ಲಿ ಡವಡವ ಆರಂಭವಾಗುತ್ತದೆ. ಇದು ಜಿಲ್ಲಾಸ್ಪತ್ರೆ ಹಾಗೂ ಜಿಲ್ಲೆಯ ಇತರ ತಾಲ್ಲೂಕು ಆಸ್ಪತ್ರೆಗಳ ಸ್ಥಿತಿ.

ಜಿಲ್ಲೆಯ 6 ತಾಲ್ಲೂಕು ಆಸ್ಪತ್ರೆಗಳಿಗೆ ಮೈಸೂರು ನಗರದಿಂದ ನಿತ್ಯ 300 ಆಮ್ಲಜನಕ ಸಿಲಿಂಡರ್‌ಗಳು ಪೂರೈಕೆಯಾಗುತ್ತವೆ. ಸದ್ಯ ಸಿಲಿಂಡರ್‌ ಪೂರೈಕೆ ವ್ಯತ್ಯಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯರು ಭಯಬೀಳುತ್ತಿದ್ದಾರೆ. ಜಿಲ್ಲೆಯ 10 ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)ಗಳಿಗೆ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿದ್ದು ಅಲ್ಲಿ ರೋಗಿಗಳನ್ನು ದಾಖಲಿಸಿಕೊಂಡಿಲ್ಲ.

ಜಿಲ್ಲಾಸ್ಪತ್ರೆಯಲ್ಲಿ 13 ಕಿಲೋ ಲೀಟರ್‌ ಸಾಮರ್ಥ್ಯದ ದ್ರವರೂಪದ ಆಮ್ಲಜನಕ ಘಟಕವಿದ್ದು 400 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 2 ದಿನಗಳಿಗೊಮ್ಮೆ ಕಡ್ಡಾಯವಾಗಿ ಆಮ್ಲಜನಕ ಪೂರೈಕೆಯಾಗಬೇಕು. ಬೆಳ್ಳೂರು ಕ್ರಾಸ್‌ನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ 2 ಕಿಲೋ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಘಟಕವಿದೆ. ಅಲ್ಲಿ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಕಾರಣ ರೋಗಿಗಳನ್ನು ಮಂಡ್ಯಕ್ಕೆ ಕಳುಹಿಸುತ್ತಿದ್ದಾರೆ.

ADVERTISEMENT

‘2 ದಿನಕ್ಕೊಮ್ಮೆ ದೊಡ್ಡ ಟ್ಯಾಂಕರ್‌ ಬರಬೇಕು. ಮೊನ್ನೆ ಸಣ್ಣ ಟ್ಯಾಂಕರ್‌ ಬಂದಿದ್ದನ್ನು ಕಂಡು ಗಾಬರಿಗೊಂಡೆವು. ತಕ್ಷಣ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ ನಂತರ ಇನ್ನೊಂದು ಟ್ಯಾಂಕರ್‌ ತರಿಸಿಕೊಳ್ಳುವಲ್ಲಿ ಯಶಸ್ವಿಯಾದೆವು. ನಿತ್ಯ ನಮ್ಮ ಎದೆಬಡಿತ ಹೆಚ್ಚಾಗುತ್ತಿದೆ. ಪರಿಸ್ಥಿತಿ ನಿಭಾಯಿಸುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.