ADVERTISEMENT

‘ವಾಪಸ್ ಬನ್ನಿ, ಮಿನಿಸ್ಟರ್ ಮಾಡ್ತೀವಿ’ ಅತೃಪ್ತರಿಗೆ ಸಿದ್ದರಾಮಯ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 8:11 IST
Last Updated 8 ಜುಲೈ 2019, 8:11 IST
   

ಬೆಂಗಳೂರು:‘ರಾಜೀನಾಮೆ ಕೊಟ್ಟು ಹೊರಗೆ ಹೋಗಿರುವ ನಮ್ಮ ಎಲ್ಲ ಶಾಸಕರನ್ನು ನಾನು ವಿನಂತಿಸುತ್ತೇನೆ. ದಯವಿಟ್ಟು ವಾಪಸ್ ಬನ್ನಿ. ನಿಮ್ಮ ಸಮಸ್ಯೆಗಳನ್ನು ನಾವು ಆಲಿಸುತ್ತೇವೆ, ಪರಿಹರಿಸುತ್ತೇವೆ...’

– ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೋಮವಾರ ಮಾಡಿಕೊಂಡ ಮನವಿ ಇದು.

ಬಿರುಸಿನ ರಾಜಕೀಯ ಚಟುವಟಿಕೆಗಳ ನಂತರ ಮಾಧ್ಯಮ ಪ್ರತಿನಿಧಿಗಳೊಡನೆ ಮಾತನಾಡಿದ ಅವರು, ‘ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ.ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ ಐದು ಬಾರಿ ಪ್ರಯತ್ನಿಸಿತ್ತು. ಇದು ಅವರ ಆರನೇ ಯತ್ನ. ಇದಲ್ಲಿಯೂ ಅವರಿಗೆ ಯಶಸ್ಸು ಸಿಗಲು ಸಾಧ್ಯವಿಲ್ಲ. ಕಾಂಗ್ರೆಸ್ ಎಂದಿಗೂ ಹೀಗೆ ಮಾಡಿರಲಿಲ್ಲ. 2008ರಲ್ಲಿಯೂ ಬಿಜೆಪಿ ಇದೇ ಥರ ಮಾಡಿ ಅಧಿಕಾರ ಗಟ್ಟಿ ಮಾಡಿಕೊಂಡಿತ್ತು’ ಎಂದು ದೂರಿದರು.

ADVERTISEMENT

‘ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಬಿಐ, ಆದಾಯ ತೆರಿಗೆ, ಜಾರಿ ನಿರ್ದೇಶನಾಯಗಳನ್ನು ದುರುಪಯೋಗಪಡಿಸಿಕೊಂಡು, ಹಣ ಮತ್ತು ಅಧಿಕಾರದ ಆಮಿಷವೊಡ್ಡಿ ಬಿಜೆಪಿಯು ಜೆಡಿಎಸ್ ಮತ್ತು ಕಾಂಗ್ರೆಸ್‌ ಶಾಸಕರನ್ನು ತನ್ನೆಡೆಗೆ ಸೆಳೆಯುತ್ತಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೇರ ಆರೋಪ ಮಾಡಿದರು.

‘ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಹಲವು ಶಾಸಕರುರಾಜೀನಾಮೆ ಕೊಟ್ಟಿದ್ದಾರೆ. ಅಂಥವರಿಗೆ ಅಧಿಕಾರದ ಹಾದಿ ಸುಗಮವಾಗಲಿ, ನಂಬಿಕೆ ಬರಲಿ ಎಂದು ಈಗಾಗಲೇ ಹಲವು ಸಚಿವರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ಕೊಟ್ಟಿದ್ದಾರೆ. ಸಚಿವ ಸಂಪುಟವನ್ನು ಈಗಲೇ ಮರುರಚನೆ ಮಾಡಿ ಎಂದು ಒಕ್ಕೊರಲಿನಿಂದ ಸಲಹೆ ನೀಡಿದ್ದಾರೆ’ ಎಂದು ನುಡಿದರು.

‘ನಮ್ಮ ಶಾಸಕರು ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ನಮ್ಮ ಪಾಲಿಗೆ ಬಂದ 22 ಸಚಿವ ಸ್ಥಾನಗಳನ್ನು ಸೀನಿಯಾರಿಟಿ, ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕತೆಯನ್ನು ಗಮನದಲ್ಲಿರಿಸಿಕೊಂಡು ಹಂಚಲಾಯಿತು. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುತ್ತೆ. ಹಿಂದಿರುಗಿ ಬನ್ನಿ’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.