ಬೆಂಗಳೂರು: ‘ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಉಳಿವಿಗೊಸ್ಕರ ಗಡಿಯ ವಿಚಾರವಾಗಿ ಅನಗತ್ಯವಾಗಿ ಮಾತನಾಡುತ್ತಿದ್ದಾರೆ. ಇಲ್ಲಿನ ಒಂದೇ ಒಂದು ಇಂಚು ಜಾಗ ಕೂಡ ಮಹಾರಾಷ್ಟ್ರಕ್ಕೆ ಸೇರಬೇಕಿಲ್ಲ. ಅವರ ಉದ್ಧಟತನವನ್ನು ಸಹಿಸಲು ಸಾಧ್ಯ
ವಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ ನಗರದಲ್ಲಿ ಶನಿವಾರ ಆಯೋಜಿಸಿದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ 190ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಇಲ್ಲಿನ ನೆಲ, ನೀರು, ಸಂಸ್ಕೃತಿ ಮತ್ತು ಭಾಷೆಯನ್ನು ರಕ್ಷಿಸುವುದು ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿ. ಬೆಳಗಾವಿ ಸೇರಿದಂತೆ ಗಡಿಯ ಎಲ್ಲ ಜಿಲ್ಲೆಗಳು ಎಂದಿದ್ದರೂ ಕರ್ನಾಟಕದ ಅವಿಭಾಜ್ಯ ಅಂಗ. ಠಾಕ್ರೆ ಅವರು ಅನಗತ್ಯ
ವಾಗಿ ಕಾಲು ಕೆರೆದುಕೊಂಡು ಮಾತನಾಡುತ್ತಿದ್ದಾರೆ. ನಮ್ಮ ಪ್ರದೇಶಗಳ ಬಗ್ಗೆ ಅವರಿಗೆ ಮಾತನಾಡುವ ಯಾವುದೇ ಹಕ್ಕಿಲ್ಲ. ಮಹಾಜನ್ ವರಿದ ಜಾರಿಯಾಗಿ ಆಗಿದೆ’ ಎಂದು ತಿಳಿಸಿದರು.
‘ನಮಗೆ ಔದಾರ್ಯ ಜಾಸ್ತಿ. ಅನ್ಯ ಭಾಷಿಗರ ಜತೆಗೆ ಅವರ ಭಾಷೆಯಲ್ಲೇ ಮಾತನಾಡುತ್ತೇವೆ. ಇದು ನಮ್ಮಲ್ಲಿನ ಕೊರತೆ. ನಾಡಿನಲ್ಲಿ ಕನ್ನಡದ ಅನಿವಾರ್ಯ ಎಂಬ ವಾತಾವರಣ ನಿರ್ಮಾಣವಾಗಬೇಕು’ ಎಂದರು.
ಸ್ವಾರ್ಥ ರಹಿತ ಜೀವನ ಅಗತ್ಯ: ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ‘ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಸ್ವಾರ್ಥರಹಿತ ಜೀವನವನ್ನು ನಡೆಸ ಬೇಕು. ಶಾಲಾ ಹಂತದಲ್ಲಿಯೇ ಇದನ್ನು ಅರ್ಥ ಮಾಡಿಸಬೇಕು’ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣಗೌಡ, ‘ಮಹಾರಾಷ್ಟ್ರದ ಮುಖ್ಯಮಂತ್ರಿ ನಿತ್ಯ ಒಂದೊಂದು ವಿಚಾರ ಇಟ್ಟುಕೊಂಡು ಗಡಿ ವಿಚಾರವಾಗಿ ಕ್ಯಾತೆ ತೆಗೆಯುತ್ತಿದ್ದಾರೆ. ಗಡಿ ತಕರಾರು ಸುಪ್ರೀಂಕೋರ್ಟ್ನಲ್ಲಿದೆ. ತೀರ್ಪು ಬರುವವರೆಗೆ ಸಮಾಧಾನದಿಂದ ಕಾಯಬೇಕು. ಅನಗತ್ಯವಾಗಿ ತಂಟೆಗೆ ಬಂದಲ್ಲಿ ನಾವು ಅವರಿಗೆ ಸಿಂಹಸ್ವಪ್ನರಾಗಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.