ಮೈಸೂರು: ರಾಜ್ಯಸಭೆ ಚುನಾವಣೆಯಲ್ಲಿ ಆತ್ಮಸಾಕ್ಷಿಯ ಮತಗಳು ಕಾಂಗ್ರೆಸ್ಗೆ ದೊರೆಯುತ್ತವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದನ್ನು ಗಮನಿಸಿದ್ದೇನೆ. ಅಂತಹ ಮತಗಳು ಅವರಿಗಷ್ಟೆ ಸಿಗುತ್ತವೆಯೇ? ನಮಗೆ ಸಿಗೋಲ್ಲವೇ? ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಕೇಳಿದರು.
ಇಲ್ಲಿನ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ಅವರಿಗೊಬ್ಬರಿಗೆ ಮಾತ್ರವೇ ಆತ್ಮಸಾಕ್ಷಿ ಇದೆಯೇ? ಉಳಿದವರಿಗೆ ಇಲ್ಲವೇ? ಅವರೊಬ್ಬರಿಗೇ ಗುತ್ತಿಗೆ ಕೊಟ್ಟಿದ್ದೇವೆಯೇ ಎಂದು ಕೇಳಿದರು.
ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ಈಗಾಗಲೇ ತಿಳಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲಾದ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರವಾದ ಉತ್ತರ ಕೊಡುತ್ತೇನೆ ಎಂದರು.
ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡರನ್ನು ಬೆಂಬಲಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿರುವುದನ್ನು ಕೇಳಿದ್ದೇನೆ. ಬಿಜೆಪಿಯವರು ಕೂಡ ದೇವೇಗೌಡರ ವಿರುದ್ಧ ಅಭ್ಯರ್ಥಿ ಹಾಕದಿರಲು ಮೊದಲು ನಿರ್ಧರಿಸಿದ್ದರು. ಅದಾದ ಬಳಿಕ ಕಾಂಗ್ರೆಸ್ನವರು ಅಭ್ಯರ್ಥಿ ಹಾಕದಿರಲು ನಿರ್ಧರಿಸಿದ್ದರಷ್ಟೆ. ಅಯ್ಯೋ ಪಾಪ ನಿಮ್ಮನ್ನು ಸೋಲಿಸಿಬಿಟ್ಟಿದ್ದೇವೆ, ಸಿದ್ದರಾಮಯ್ಯ ಅವರು ನಿಮ್ಮನ್ನು ತುಮಕೂರಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿಬಿಟ್ಟಿದ್ದಾರೆ ಎಂದೇನು ಕಾಂಗ್ರೆಸ್ನವರು ಬಂದಿರಲಿಲ್ಲ. ಬಿಜೆಪಿ ನಡೆ ನೋಡಿ ಕಾಂಗ್ರೆಸ್ನವರು ನಿರ್ಧರಿಸಿದ್ದರು ಎಂದು ಪ್ರತಿಕ್ರಿಯಿಸಿದರು.
ರಾಜ್ಯಸಭೆ ಚುನಾವಣೆಯಲ್ಲಿ ಕೊರತೆ ಮತಗಳನ್ನು ತುಂಬಿಕೊಳ್ಳಲು ಪ್ರಯತ್ನ ಮಾಡುತ್ತೇವೆ. ಅದಕ್ಕಾಗಿ ಯಾವ ಆಪರೇಷನ್ ಅನ್ನೂ ಮಾಡುವುದಿಲ್ಲ. ಸಿದ್ದರಾಮಯ್ಯ ಅವರಂತೆ ನಾವೂ ಆತ್ಮಸಾಕ್ಷಿ ಮತಗಳನ್ನು ನಂಬಿದ್ದೇವೆ ಎಂದರು.
ಶಾಸಕರಾದ ಸಾ.ರಾ.ಮಹೇಶ್, ಬಂಡೆಪ್ಪ ಕಾಶೆಂಪುರ, ಮುಖಂಡರಾದ ಎಂ.ಜೆ. ರವಿಕುಮಾರ್, ಆರ್. ಲಿಂಗಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.