ಮುಖ್ಯಮಂತ್ರಿ ಸಿದ್ದರಾಮಯ್ಯ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಿವೇಶನ ಹಂಚಿಕೆ ವಿಚಾರದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ನೀಡಿದ್ದ ಶೋಕಾಸ್ ನೋಟಿಸ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸುಮಾರು 60 ಪುಟಗಳ ಉತ್ತರ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ಹೇಳಿವೆ.
‘ಮುಡಾದಿಂದ ಪತ್ನಿ ಪಡೆದಿರುವ ನಿವೇಶನಗಳ ವಿಚಾರದಲ್ಲಿ ಯಾವುದೇ ಕಾನೂನುಬಾಹಿರ ಪ್ರಕ್ರಿಯೆ, ಅಧಿಕಾರ ದುರ್ಬಳಕೆ ಆಗಿಲ್ಲ. ನನ್ನ ಮೇಲಿರುವ ಎಲ್ಲ ಆರೋಪಗಳು ನಿರಾಧಾರ’ ಎಂದು ಸಮರ್ಥನೆಗಳ ಸಹಿತ ತಮ್ಮ ಉತ್ತರದಲ್ಲಿ ಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ನನಗೆ ನೀವು ನೋಟಿಸ್ ಕೊಟ್ಟಿರುವುದು ಕ್ರಮಬದ್ದವಲ್ಲ. ಅಧಿಕಾರದಲ್ಲಿದ್ದಾಗ ನಾನು ಸ್ವಜನಪಕ್ಷಪಾತ ಮಾಡಿಲ್ಲ. ಕಾನೂನುಬಾಹಿರವಾಗಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ದೂರುದಾರರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ’ ಎಂದೂ ಉತ್ತರದಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಗೊತ್ತಾಗಿದೆ.
‘ನ್ಯಾಯಸಮ್ಮತವಾಗಿ ನನ್ನ ಕುಟುಂಬ ನಿವೇಶನ ಪಡೆದಿದೆಯೇ ಹೊರತು, ಕಾನೂನುಬಾಹಿರವಾಗಿ ಅಲ್ಲ. ಈ ಸಂಬಂಧ ಸರ್ಕಾರ ಮುಖ್ಯ ಕಾರ್ಯದರ್ಶಿ ನೀಡಿರುವ ಎಲ್ಲ ದಾಖಲಾತಿಗಳನ್ನು ಪರಿಶೀಲಿಸಬಹುದು. ನಿವೇಶನ ಹಂಚಿಕೆಗೆ ಕ್ರಮಬದ್ದವಾಗಿದೆ ಎನ್ನುವುದಕ್ಕೆ ಆ ದಾಖಲೆಗಳೇ ಸಾಕ್ಷಿ. ನನಗೆ ನೊಟೀಸ್ ನೀಡಿರುವುದು ಸಮಂಜಸವಲ್ಲ. ದೂರುದಾರರ ಪೂರ್ವಾಪರಗಳ ಬಗ್ಗೆಯೂ ರಾಜ್ಯದ ಜನರಿಗೆ ಗೊತ್ತಿದೆ. ಹೀಗಾಗಿ, ನನ್ನ ವಿರುದ್ದ ಮೊಕದ್ದಮೆ ದಾಖಲಿಸಲು ಪ್ರಾಸಿಕ್ಯೂಷನ್ ಅನುಮತಿಗಾಗಿ ಸಲ್ಲಿಕೆಯಾಗಿರುವ ಅರ್ಜಿಯನ್ನು ತಿರಸ್ಕರಿಸಬೇಕು’ ಎಂದೂ ಪತ್ರದಲ್ಲಿದೆ ಎಂದೂ ಗೊತ್ತಾಗಿದೆ.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು (ಪ್ರಾಸಿಕ್ಯೂಷನ್) ಅನುಮತಿ ಕೋರಿ ಜುಲೈ 26ರಂದು ಅಬ್ರಹಾಂ ಅವರು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು. ಮರುದಿನವೇ, ‘ನಿಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಯಾಕೆ ಅನುಮತಿ ನೀಡಬಾರದು’ ಎಂದು ಕೇಳಿ ಮುಖ್ಯಮಂತ್ರಿಗೆ ರಾಜ್ಯಪಾಲರು ನೋಟಿಸ್ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.