ಬೆಂಗಳೂರು: ಸಹಕಾರ ಸಮ್ಮೇಳನದಲ್ಲಿ ಭಾಗವಹಿಸಲು ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ನೋಟು ಅಮಾನ್ಯೀಕರಣದ ಘೋಷಣೆ ಆದ ದಿನವೇ ನೀವು ನಿರ್ದೇಶಕರಾಗಿದ್ದ ಎಡಿಸಿ ಬ್ಯಾಂಕ್ಗೆ ₹ 500 ಕೋಟಿ ಜಮೆಯಾಗಿತ್ತು. ನೋಟು ಅಮಾನ್ಯೀಕರಣದ ಸಮನ್ವಯದ ಬಗ್ಗೆ ಸಹಕಾರ ಸಮ್ಮೇಳನದಲ್ಲಿ ಬಹಿರಂಗಪಡಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಕೃಷಿ ಕಾನೂನುಗಳನ್ನು ಹಿಂಪಡೆಯುವ ಮೂಲಕ ಕೇಂದ್ರ ಸರ್ಕಾರ ರೈತರಿಗೆ ತಲೆಬಾಗಿದೆ. ಆದರೆ, ರಾಜ್ಯ ಸರ್ಕಾರವೇಕೆ ಅದನ್ನು ಮಾಡುತ್ತಿಲ್ಲ? ಕೇಂದ್ರ ಸರ್ಕಾರ ಮಾತ್ರ ಕಾನೂನನ್ನು ಹಿಂಪಡೆದು, ರಾಜ್ಯ ಸರ್ಕಾರಗಳು ಈ ರೀತಿ ಮೊಂಡುತನ ಪ್ರದರ್ಶಿಸುವುದು ನಿಮ್ಮ ಯೋಜನೆಯಾಗಿತ್ತೇ? ಈ ಮೂಲಕ ರೈತರನ್ನು ಮೂರ್ಖರನ್ನಾಗಿ ಮಾಡುತ್ತಿದ್ದೀರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇದೇವೇಳೆ, ಕೃಷಿ ಕಾಯ್ದೆ ಹಿಂಪಡೆಯಲು ಸಿಎಂ ಬಸವರಾಜ ಬೊಮ್ಮಾಯಿಗೆ ಸೂಚಿಸುವಿರಾ? ಅಥವಾ ಮೌನವಾಗಿದ್ದು ನಮ್ಮ ರೈತರನ್ನು ವಂಚಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಇನ್ನು, ಯಶಸ್ವಿನಿ ಯೋಜನೆಯನ್ನು ರೀಲಾಂಚ್ ಮಾಡುತ್ತಿರುವ ನೀವು ಆಯುಷ್ಮಾನ್ ಭಾರತ್ ಪಿಎಂ ಜನಾರೋಗ್ಯ ಯೋಜನೆ ವಿಫಲ ಎಂದು ಹೇಳುವಿರಾ? ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.