ದಾವಣಗೆರೆ: ಖಜಾನೆ ಲೂಟಿಯಾಗಿದೆ ಎಂದು ಬಿಜೆಪಿ ಅಧ್ಯಕ್ಷ ಕಟೀಲ್ ಹೇಳುತ್ತಾರೆ. ಲೂಟಿಯಾಗಿದೆಯಾ ಎಂದು ಮುಖ್ಯಮಂತ್ರಿಯನ್ನು ಕೇಳಿದರೆ ಇಲ್ಲ ಎಂದು ತಲೆಯಾಡಿಸುತ್ತಾರೆ. ಗೋಲಿ ಆಡೋ ಮಕ್ಕಳಂತೆ ಆಡುತ್ತಾರೆ. ಒಬ್ಬರಿಗೂ ಗಂಭೀರತೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಹರಿಹರದಲ್ಲಿ ಭಾನುವಾರ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದರು.
ಎಲ್ಲರಿಗೂ ಸಮಾನತೆ ನೀಡುವ ಸಂವಿಧಾನವನ್ನು ಅಂಬೇಡ್ಕರ್ ಕೊಟ್ಟರು. ಅದಕ್ಕೇ ಕೆಲವರಿಗೆ ಹೊಟ್ಟೆ ಉರಿ. ಬಿಜೆಪಿಗೆ ಪ್ರಜಾಪ್ರಭುತ್ವದ ಸತ್ಸಂಪ್ರದಾಯ, ಮಾನವೀಯತೆಯಲ್ಲಿ ನಂಬಿಕೆ ಇಲ್ಲ. ನಿರಂಕುಶ ಆಡಳಿತ ಬಯಸುವ ಅವರು ಅದಕ್ಕಾಗಿಯೇ ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳುತ್ತಾರೆ. ಸಂವಿಧಾನ ಬದಲಾಯಿಸಲು ಹೊರಟರೆ ರಕ್ತಪಾತವಾಗುತ್ತದೆ ಎಂದು ಎಚ್ಚರಿಸಿದರು.
ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್, ಶಾದಿ ಭಾಗ್ಯ, ವಿದ್ಯಾಸಿರಿ, ಪರಿಶಿಷ್ಟ ಜಾತಿ, ಪಂಗಡಕ್ಕೆ ಉಪಯೋಜನೆ ಹೀಗೆ ಜನರಿಗಾಗಿ ಅನೇಕ ಯೋಜನೆ ತಂದರೂ ಅಪಪ್ರಚಾರ ಮಾಡಿದವರ ಮಾತನ್ನೇ ನೀವು ನಂಬಿದಿರಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಂದಿರಾ ಕ್ಯಾಂಟೀನ್, ಅನ್ನಭಾಗ್ಯ ಸಹಿತ ಯಾವುದೇ ಯೋಜನೆ ರದ್ದು ಮಾಡಲು ಬಿಡುವುದಿಲ್ಲ. ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.
‘ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಕಿತ್ತೂರು ರಾಣಿ, ಸಂಗೊಳ್ಳಿ ರಾಯಣ್ಣ, ಅಬ್ಬಕ್ಕರ ಜಯಂತಿಯಂತೆಯೇ ಟಿಪ್ಪು ಸುಲ್ತಾನ್ ಜಯಂತಿಯನ್ನೂ ಜಾರಿಗೆ ತಂದೆ. ಅದನ್ನು ರದ್ದು ಮಾಡಿದ್ದು ಸರಿಯಲ್ಲ. ದೊಡ್ಡವರನ್ನು ಜಾತಿ, ಧರ್ಮವನ್ನು ಎಳೆದು ತಂದು ನೋಡಬಾರದು’ ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.