ಬಾದಾಮಿ : ‘ 40 ವರ್ಷಗಳ ರಾಜಕಾರಣದಲ್ಲಿ ನಾನು ಇಂತಹ ಭ್ರಷ್ಟ ಸರ್ಕಾರವನ್ನು ನೋಡಿಲ್ಲ ‘ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಡಿಯೂರಪ್ಪ ಸರ್ಕಾರದಲ್ಲಿ ಅವರ ಮಗ ಮತ್ತು ಮಂತ್ರಿಗಳು ದುಡ್ಡು ಮಾಡುವುದರಲ್ಲಿಯೇ ನಿರತರಾಗಿದ್ದಾರೆ. ಸಿಎಂ ಪುತ್ರ ವಿಜಯೇಂದ್ರ ಜೆಸಿಬಿಯಿಂದ ದುಡ್ಡು ಬಾಚುತ್ತಿದ್ದಾರೆ ಎಂದರು.
‘ಬಹುಮತವಿಲ್ಲದ ಸರ್ಕಾರ ಆಪರೇಶನ್ ಕಮಲದಿಂದ ಅಧಿಕಾರಕ್ಕೆ ಬಂದ ಸಚಿವರು ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಎನ್ಒಸಿ ಕೊಡಲು ಶೇ 10 ಹಣ ಪಡೆಯುತ್ತಿದ್ದಾರೆ' ಎಂದು ಆರೋಪಿಸಿದರು ಎಂದರು.
ಒಬ್ಬ ಸಬ್ ರಜಿಸ್ಟರ್ ವರ್ಗಾವಣೆಗೆ ₹60 ರಿಂದ 70 ಲಕ್ಷ ಲಂಚ ಕೊಡಬೇಕು. ಪಿಎಸ್ಐ ವರ್ಗಾವಣೆಗೆ ₹60 ಲಕ್ಷ ಕೊಡಬೇಕು ಎಂದರು.
ಹಿಂದೆ ಸಮ್ಮಿಶ್ರ ಸರ್ಕಾರವಿದ್ದಾಗ ಕೆರೂರ ಏತನೀರಾವರಿ ಯೋಜನೆ ಮತ್ತು ಬಾದಾಮಿ, ಕೆರೂರ ಪಟ್ಟಣ ಮತ್ತು 18 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ ಕ್ರಿಯಾ ಯೋಜನೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ನಾನು ವಿಧಾನಸಭೆ ವಿರೋಧ ಪಕ್ಷದ ನಾಯಕ ಎನ್ನುವ ಕಾರಣಕ್ಕೆ ಮೂರು ವರ್ಷಗಳ ನಂತರ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.
ಶಾಸಕರ ಅನುದಾನದಲ್ಲಿ ತಾಲ್ಲೂಕಿನ ಕಾರ್ಯನಿತರ ಪತ್ರಕರ್ತರ ಭವನಕ್ಕೆ ₹5 ಲಕ್ಷ ಮಂಜೂರು ಮಾಡುವುದಾಗಿ ತಿಳಿಸಿದರು.
ಕಬ್ಬಲಗೇರಿ ಗ್ರಾಮದ ಸಮೀಪ ನೀರಾವರಿ ಕಾಲುವೆ ದುರಸ್ತಿ, ಕೆಂದೂರ ಕೆರೆಯ ಅಭಿವೃದ್ಧಿ ಬಗ್ಗೆ ಕೇಳಿದಾಗ ಸರ್ಕಾರದಲ್ಲಿ ಹಣದ ಕೊರತೆ ಇದೆ ಯಾವುದೇ ಯೋಜನೆಗೆ ಅನುದಾನವನ್ನೇ ಕೊಡುತ್ತಿಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.