ಕೊಪ್ಪಳ: ಆನೆಗೊಂದಿ ಉತ್ಸವದಲ್ಲಿ ಸಿಎಎವಿರೋಧಿಸಿಕವನ ವಾಚನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಿದ ಆರೋಪದ ಮೇಲೆ ಸಾಹಿತಿ ಸಿರಾಜ್ ಬಿಸರಳ್ಳಿ ಮತ್ತು ಕನ್ನಡ ನೆಟ್ ಡಾಟ್ ಕಾಂ ಸಂಪಾದಕ ರಾಜಾಭಕ್ಷಿ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉತ್ಸವದ ವಿದ್ಯಾರಣ್ಯ ವೇದಿಕೆಯಲ್ಲಿ ಸಿಎಎ ವಿರೋಧಿಸಿ 'ನೀ ಯಾವಾಗ ದಾಖಲೆ ನೀಡುತ್ತೀ' ಎಂಬ ಕವನ ವಾಚಿಸಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ್ದ ರಾಜಾಭಕ್ಷಿ ಅವರ ಮೇಲೆ ಬಿಜೆಪಿ ಯುವ ಮೋರ್ಚಾದ ಮುಖಂಡರೊಬ್ಬರು ದೂರು ದಾಖಲಿಸಿದ್ದರು.
ಪ್ರಕರಣ ದಾಖಲಾದ ನಂತರ ಜಾಮೀನು ದೊರೆಯದೇಇಬ್ಬರೂ ತಲೆ ಮರೆಸಿಕೊಂಡಿದ್ದರು. ಮಂಗಳವಾರ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಲು ನ್ಯಾಯಾಲಯಕ್ಕೆ ಬಂದಿದ್ದರು.ಮಧ್ಯಂತರ ಜಾಮೀನನ್ನು ನ್ಯಾಯಾಲಯ ತಾಂತ್ರಿಕ ಕಾರಣದಿಂದ ತಿರಸ್ಕರಿಸಿತು. ಹೆಚ್ಚಿನ ವಿಚಾರಣೆ ನಡೆಸಲು ತಮ್ಮ ವಶಕ್ಕೆ ನೀಡಬೇಕು ಎಂಬ ಪೊಲೀಸರ ಮನವಿ ಮೇರೆಗೆ ನ್ಯಾಯಾಧೀಶರು ಬುಧವಾರ ಮಧ್ಯಾಹ್ನ 2 ಗಂಟೆವರೆಗೆ ನೀಡಿ ಆದೇಶ ನೀಡಿದರು.
ಪೊಲೀಸರು ಇಬ್ಬರನ್ನು ತಮ್ಮ ವಶಕ್ಕೆಪಡೆದು ಕರೆದುಕೊಂಡು ಹೋದರು.ಬುಧವಾರ ಗಂಗಾವತಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.