ADVERTISEMENT

ಬೆಂಗಳೂರು | ಆರು ಮಸೂದೆ ರಾಜ್ಯಪಾಲರ ಬಳಿ ಬಾಕಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 16:17 IST
Last Updated 1 ಫೆಬ್ರುವರಿ 2024, 16:17 IST
ಎಚ್‌. ಕೆ. ಪಾಟೀಲ
ಎಚ್‌. ಕೆ. ಪಾಟೀಲ   

ಬೆಂಗಳೂರು: ರಾಜ್ಯಪಾಲರ ಅಂಗೀಕಾರಕ್ಕೆ ಕಳಿಸಿದ್ದ 19 ಮಸೂದೆಗಳಲ್ಲಿ ಒಟ್ಟು ಆರು ಮಸೂದೆಗಳು ಅವರ ಬಳಿಯೇ ಉಳಿದಿದ್ದು, ತಾಂತ್ರಿಕ ಕಾರಣಗಳಿಗಾಗಿ ಉಳಿದಿವೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

‘ಮುಖ್ಯವಾಗಿ, ಯಲ್ಲಮ್ಮನಗುಡ್ಡ ಅಭಿವೃದ್ಧಿ ಮಂಡಳಿ, ಬಾಂಬೆ ಪಬ್ಲಿಕ್‌ ಟ್ರಸ್ಟ್‌ ಕಾಯ್ದೆಯ ಮಸೂದೆಗಳೂ ಇವೆ. ಕೆಲವು ವಿವರಗಳನ್ನು ಅವರು ಕೇಳಿದ್ದು, ಅವುಗಳಿಗೆ ಸೂಕ್ತ ಮಾಹಿತಿ ಒದಗಿಸಲಾಗಿದೆ. ಈ ಸಂಬಂಧ ನಮ್ಮ ಇಲಾಖೆ ಮತ್ತು ರಾಜಭವನದ ನಡುವೆ ಪತ್ರ ವ್ಯವಹಾರ ನಡೆಯುತ್ತಿದೆ’ ಎಂದು ತಿಳಿಸಿದರು.

ಕರ್ನಾಟಕ ಹೈಕೋರ್ಟ್‌ (ತಿದ್ದುಪಡಿ) ಮಸೂದೆ 2023 ಅನ್ನು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯದೇ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸುವ ಅಗತ್ಯ ಏನಿತ್ತು ಎಂಬುದನ್ನು ಉಲ್ಲೇಖಿಸಿಲ್ಲ. ಆ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ರಾಜ್ಯಪಾಲರು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ADVERTISEMENT

ಅಲ್ಲದೇ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಎರಡನೇ ತಿದ್ದುಪಡಿ) ಮಸೂದೆ 2023 ಅನ್ನು ಕೂಡ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯದೇ ಸದನದಲ್ಲಿ ಮಂಡಿಸುವ ತುರ್ತು ಏನಿತ್ತು, ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದೂ ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.