ADVERTISEMENT

ಶೀಘ್ರವೇ ಸಂಪುಟ ವಿಸ್ತರಣೆ ಆಗಲಿ: ಎಚ್.ಎಂ. ರೇವಣ್ಣ

ಖಾಲಿ ಬಿಡುವುದರಿಂದ ಪಕ್ಷಕ್ಕೆ ಒಳ್ಳೆಯದಲ್ಲ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 11:18 IST
Last Updated 18 ನವೆಂಬರ್ 2018, 11:18 IST
ಎಚ್.ಎಂ. ರೇವಣ್ಣ
ಎಚ್.ಎಂ. ರೇವಣ್ಣ   

ನವದೆಹಲಿ: ಸಂಪುಟ ವಿಸ್ತರಣೆ ಕುರಿತು ಪಕ್ಷದ ರಾಜ್ಯ ಮುಖಂಡರು ಹೈಕಮಾಂಡ್ ಗಮನ ಸೆಳೆಯುವ ಮೂಲಕ ಆದಷ್ಟು ಬೇಗ ಖಾಲಿ ಇರುವ 8 ಸಚಿವ ಸ್ಥಾನ ಭರ್ತಿ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಮನವಿ ಮಾಡಿದರು.

ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಷಾಢ, ಉಪ ಚುನಾವಣೆ ನೆಪ ಇರಿಸಿ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಂದಕ್ಕೆ ಹಾಕಲಾಗಿದೆ. ಈಗ ಕಾಲ ಕೂಡಿ ಬಂದಿದ್ದು ತಡ ಮಾಡದೆ ಆಕಾಂಕ್ಷಿಗಳಿಗೆ ಸಚಿವ ಸ್ಥಾನ ನೀಡಬೇಕು ಎಂದರು.

ಸಂಪುಟದಲ್ಲಿ ಇಷ್ಟೊಂದು ಸ್ಥಾನಗಳನ್ನು ಖಾಲಿ ಇರಿಸುವುದು ಪಕ್ಷಕ್ಕೂ, ರಾಜ್ಯಕ್ಕೂ ಒಳ್ಳೆಯದಲ್ಲ ಎಂದ ಅವರು, ಕುರುಬ ಸಮುದಾಯದವರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಎಸ್.ಸಿ, ಎಸ್.ಟಿ ಸಮುದಾಯದ ಪ್ರತಿಭಾವಂತರು ಸಾಮಾನ್ಯ ವರ್ಗದಿಂದ ಗೆಜೆಟೆಡ್ ಹುದ್ದೆ ಪಡೆಯುವ ಅವಕಾಶವನ್ನು ಕಸಿದುಕೊಳ್ಳುತ್ತಿರುವ ಕೆಪಿಎಸ್‌ಸಿ ಕ್ರಮ‌ ಸರಿಯಲ್ಲ ಎಂದು ರೇವಣ್ಣ ದೂರಿದರು.

1998, 1999 ಮತ್ತು 2004ರಲ್ಲಿ ನೇಮಕ ಮಾಡಿದ್ದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಸಂಬಂಧಿಸಿದಂತೆ 2016ರಲ್ಲಿ ಹೈಕೋರ್ಟ್ ನೀಡಿದ್ದ ಆದೇಶದಲ್ಲಿದ್ದ ಒಂದು ಅಂಶವನ್ನೇ ಆಧಾರವಾಗಿ ಇರಿಸಿಕೊಂಡು ಕೆಪಿಎಸ್ ಸಿ ಈಗ ಮೆರಿಟ್ ಆಧಾರದ ಹುದ್ದೆಗಳಿಂದ ಪರಿಶಿಷ್ಟರು ಮತ್ತು ಹಿಂದುಳಿದವರನ್ನು ಕಡೆಗಣಿಸುವುದು ಬೇಡ. ಈ ಕುರಿತ ವಿಶೇಷ ಮೇಲ್ಮನವಿಯ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇರುವುದರಿಂದ ಇದಕ್ಕೆ ಕೈಹಾಕುವುದು‌ ಬೇಡ ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿಯವರು ಕೂಡಲೇ ಈ ಕುರಿತು ಸಂಪುಟ ಸಭೆಯಲ್ಲಿ‌ ಚರ್ಚಿಸಿ ಸೂಕ್ತ‌ ಕಾನೂನು ರೂಪಿಸಬೇಕು ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.