ಬೆಂಗಳೂರು: ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಸೋಮವಾರ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಗರಂ ಆಗಿ ಹರಿಹಾಯ್ದ ಘಟನೆ ನಡೆಯಿತು.
ಕುಮಾರಸ್ವಾಮಿ ಸರ್ಕಾರದ ವಿಶ್ವಾಸ ನಿರ್ಣಯದ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಯಾವುದೇ ಕಲಾಪ ನಡೆಸಬಾರದು ಎಂದು ಬಿಜೆಪಿ ಬೇಡಿಕೆ ಮುಂದಿಟ್ಟಿತ್ತು. ಆಗ ಡಿ.ಕೆ.ಶಿವಕುಮಾರ್ ಅವರು ತಮ್ಮ ಎಂದಿನ ಧಾಟಿಯಲ್ಲಿ, ‘ಕಲಾಪ ನಡಿಸ್ರಿ ಏನೂ ಆಗಲ್ಲ’ ಎಂದರು.
ಇದು ರಮೇಶ್ ಕುಮಾರ್ ಅವರನ್ನು ಸಿಟ್ಟಿಗೆಬ್ಬಿಸಿತು. ‘ನಾನು ಸಭಾಧ್ಯಕ್ಷ ನನಗೆ ಯಾರೂ ಆದೇಶ ಕೊಡಬೇಕಾಗಿಲ್ಲ. ಏನು ಮಾಡಬೇಕು ಎಂಬುದು ನನಗೆ ಗೊತ್ತು’ ಎಂದು ತಿರುಗೇಟು ನೀಡಿದರು. ಇದರಿಂದ ಶಿವಕುಮಾರ್ ಸುಮ್ಮನಾದರು ಎಂದು ಮೂಲಗಳು ತಿಳಿಸಿವೆ.
ಗುರುವಾರ ಬೆಳಿಗ್ಗೆ ವಿಶ್ವಾಸಮತ ನಡೆಸಲು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಒಮ್ಮತಕ್ಕೆ ಬಂದವು. ಆದರೆ, ಗುರುವಾರದವರೆಗೆ ಸದನದ ಕಲಾಪ ನಡೆಸಬೇಕು ಎಂದು ದೋಸ್ತಿ ನಾಯಕರು ಒತ್ತಡ ಹೇರಿದಾಗ. ಬಿಜೆಪಿ ಅದನ್ನು ವಿರೋಧಿಸಿತು. ಒಂದು ವೇಳೆ ಕಲಾಪ ನಡೆಸಲು ಮುಂದಾದರೆ ಅದರಲ್ಲಿ ಭಾಗವಹಿಸುವುದಿಲ್ಲ ಎಂದು ಬಿಜೆಪಿ ಬೆದರಿಕೆ ಒಡ್ಡಿತು. ಬಿಜೆಪಿ ತನ್ನ ಬೇಡಿಕೆಗೆ ಅಂಟಿಕೊಂಡಾಗ, ‘ಲೋಕಸಭೆಯಲ್ಲಿ ಮತ್ತು ರಾಜ್ಯದಲ್ಲಿ ಈ ಹಿಂದೆ ಇಂತಹ ಸ್ಥಿತಿಯನ್ನು ಹೇಗೆ ನಿಭಾಯಿಸಲಾಗಿತ್ತು ಎಂಬುದನ್ನು ನೋಡಿ ಬಳಿಕ ತೀರ್ಮಾನ ಪ್ರಕಟ ಮಾಡುತ್ತೇನೆ’ ಎಂದು ರಮೇಶ್ ಕುಮಾರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.