ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆಗೆ ವಿಶೇಷ ಆಂದೋಲನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 16:16 IST
Last Updated 30 ನವೆಂಬರ್ 2022, 16:16 IST

ಬೆಂಗಳೂರು: ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರ ಹೊರತುಪಡಿಸಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಮತಗಟ್ಟೆ ಹಂತದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ವಿಶೇಷ ಆಂದೋಲನ ಆರಂಭಿಸಲಾಗಿದೆ. ಈಗಾಗಲೇ ಸಿದ್ಧಪಡಿಸಿರುವ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ನವೆಂಬರ್‌ 9ರಂದು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಡಿ.8ರವರೆಗೂ ಆಕ್ಷೇಪಣೆ ಸ್ಲಲಿಸಲು ಅಥವಾ ಹಕ್ಕು ಮಂಡಿಸಲು ಅವಕಾಶವಿದೆ. ಮಂಗಳವಾರದಿಂದ ನಾಲ್ಕು ದಿನಗಳ ವಿಶೇಷ ಆಂದೋಲನ ಆರಂಭಿಸಿದ್ದು, ಮತಗಟ್ಟೆ ಹಂತದಲ್ಲಿ ಪರಿಶೀಲನೆಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಲೆಕ್ಕಾಧಿಕಾರಿ, ಮತಗಟ್ಟೆ ಅಧಿಕಾರಿ, ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮ ಸಹಾಯಕರು, ಅಂಗನವಾಡಿ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳು ಮತ್ತು ಸ್ವಯಂಸೇವಕರ ಸಹಭಾಗಿತ್ವದಲ್ಲಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ.

ಹೆಸರು ಸೇರ್ಪಡೆ (ನಮೂನೆ–6), ಅನಿವಾಸಿ ಭಾರತೀಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ (ನಮೂನೆ–6ಎ), ಮತದಾರರ ಪಟ್ಟಿಯೊಂದಿಗೆ ಆಧಾರ್‌ ಅಥವಾ ನಮೂನೆ 6–ಬಿಯಲ್ಲಿ ನಮೂದಿಸಿದ ಇತರ 11 ದಾಖಲೆಗಳಲ್ಲಿ ಒಂದನ್ನು ಜೋಡಿಸುವುದು (ನಮೂನೆ–6ಬಿ), ಹೆಸರು ಸೇರ್ಪಡೆ ವಿರುದ್ಧ ಆಕ್ಷೇಪಣೆ/ ಹೆಸರು ಕೈಬಿಡಲು ಕೋರಿಕೆ (ನಮೂನೆ–7) ಮತ್ತು ವಿಳಾಸ ಬದಲಾವಣೆ, ಮೊಬೈಲ್‌ ಸಂಖ್ಯೆ ನಮೂದಿಸುವುದು, ಅಸ್ಪಷ್ಟ ಭಾವಚಿತ್ರದ ಬದಲಾವಣೆಗೆ (ನಮೂನೆ–8) ಕೋರಿಕೆ ಸಲ್ಲಿಸಲು ಡಿ.8ರವರೆಗೂ ಅವಕಾಶವಿದೆ.

ADVERTISEMENT

ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ಹಕ್ಕು ಮಂಡನೆ ಅಥವಾ ಆಕ್ಷೇಪಣೆಗಳಲ್ಲಿ ಡಿ.26ರಂದು ವಿಲೇವಾರಿ ಮಾಡಲಾಗುತ್ತದೆ. 2023ರ ಜನವರಿ 5ಕ್ಕೆ ಮತದಾರರ ಪಟ್ಟಿಯ ಅಂತಿಮ ಪ್ರಕಟಣೆ ನಡೆಯಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.