ಬೆಂಗಳೂರು: ಮೈತ್ರಿ ಸರ್ಕಾರವನ್ನು ಆತಂಕದಲ್ಲಿ ಕೆಡವಿರುವ ಶಾಸಕರ ರಾಜೀನಾಮೆ ವದಂತಿ ಗುರುವಾರವೂ ಮುಂದುವರಿದಿತ್ತು.
ರಾಜೀನಾಮೆ ಕೊಟ್ಟಿರುವುದಾಗಿ ಹೇಳಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಜತೆಗೆ ಇನ್ನೂ ಐದಾರು ಶಾಸಕರು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ರಾಜೀನಾಮೆ ಕೊಡಲಿದ್ದಾರೆ. ಸಂಜೆ ಹೊತ್ತಿಗೆ ಈ ಸಂಖ್ಯೆ ಎಂಟನ್ನು ದಾಟಲಿದೆ ಎಂಬ ಗುಲ್ಲು ಹರಿದಾಡಿತು.
ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಅವರು ವಿಧಾನಸೌಧದ ತಮ್ಮ ಕೊಠಡಿಯಲ್ಲೇ ಇದ್ದರು. ಹಾಗಿದ್ದರೂ ಯಾವೊಬ್ಬ ಶಾಸಕರು ಅತ್ತ ಮುಖ ಹಾಕಲಿಲ್ಲ. ‘ಅಧಿವೇಶನಕ್ಕೆ ಮುನ್ನ ಇಂತಹ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಯಾರೊಬ್ಬರೂ ರಾಜೀನಾಮೆ ಕೊಡುವುದಿಲ್ಲ. ಎಲ್ಲವೂ ಪುಕಾರು’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.
ಅತೃಪ್ತ ಶಾಸಕರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಬಿಜೆಪಿಯ ದೆಹಲಿ ವರಿಷ್ಠರ ಜತೆಗೆ ನಿಕಟ ಸಂಪರ್ಕದಲ್ಲಿರುವವರು ಒಟ್ಟಾಗಿ ರಾಜೀನಾಮೆ ನೀಡಲಿದ್ದಾರೆ. ಮೊದಲು ಕಾಂಗ್ರೆಸ್ನ ಐದಾರು ಶಾಸಕರು ರಾಜೀನಾಮೆ ಕೊಡಲಿದ್ದು, ಬಳಿಕ ಈ ಸರಣಿಗೆ ಜೆಡಿಎಸ್ನ ನಾಲ್ಕೈದು ಶಾಸಕರು ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ವಿಧಾನಸೌಧದ ಕಾರಿಡಾರ್ನಲ್ಲಿ ಹರಿದಾಡಿದವು.
‘ಸದ್ಯಕ್ಕೆ ರಾಜೀನಾಮೆ ಕೊಡುವುದಿಲ್ಲ. ಮೊದಲು ಐದಾರು ಜನರು ಕೊಡಲಿ. ಆಮೇಲೆ ನಾವು ಕೊಡುತ್ತೇವೆ’ ಎಂದು ಬಿ.ಸಿ. ಪಾಟೀಲ ಹೇಳುತ್ತಿದ್ದಾರಂತೆ. ‘ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ’ ಎಂದು ನಾಗೇಂದ್ರ ಪ್ರತಿಪಾದಿಸಿದ್ದಾರೆ. ಹೀಗಾಗಿ, ಗುರುವಾರ ಯಾರೂ ಕೊಡಲಿಲ್ಲ. ಅಧಿವೇಶನದ ಹೊತ್ತಿಗೆ ದೊಡ್ಡ ಮಟ್ಟದ ಗುಂಪು ರಾಜೀನಾಮೆ ಕೊಟ್ಟು, ಮೈತ್ರಿ ಸರ್ಕಾರವನ್ನು ಅಪಾಯಕ್ಕೆ ಸಿಲುಕಿಸಲಿದೆ’ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.