ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೈಕ್ಷಣಿಕವಾಗಿ ಕಳಪೆ ಸಾಧನೆ ಮಾಡುತ್ತಿದ್ದ ಜಿಲ್ಲೆಗಳು ಈ ಬಾರಿ ಅತ್ಯುತ್ತಮ ಸಾಧನೆ ತೋರಿವೆ. ಪ್ರತಿ ವರ್ಷ ಮುಂಚೂಣಿಯಲ್ಲಿರುತ್ತಿದ್ದ ಜಿಲ್ಲೆಗಳನ್ನು ಹಿಂದಿಕ್ಕಿ ಹಾಸನ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಕ್ರಮವಾಗಿ ಮೊದಲ ಮೂರು ರ್ಯಾಂಕಿಂಗ್ ಪಡೆದಿವೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾವಾರು ಫಲಿತಾಂಶ ನೀಡಿಕೆಯ ಮಾನದಂಡಗಳನ್ನು ಬದಲಾವಣೆ ಮಾಡಿರುವುದೇ ಈ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದೆ.
ಕಳೆದ ವರ್ಷ 7 ನೇ ಸ್ಥಾನದಲ್ಲಿದ್ದ ಹಾಸನ ಮೊದಲ ಸ್ಥಾನ, 17 ನೇ ಸ್ಥಾನದಲ್ಲಿದ್ದ ರಾಮನಗರ 2ನೇ ಸ್ಥಾನ, 14ನೇ ಸ್ಥಾನದಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ 3 ನೇ ಸ್ಥಾನಕ್ಕೇರಿವೆ. ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಉಡುಪಿ 5ನೇ ಸ್ಥಾನಕ್ಕೆ, 2ನೇ ಸ್ಥಾನದಲ್ಲಿದ್ದ ಉತ್ತರ ಕನ್ನಡ 4 ಸ್ಥಾನ, 3 ನೇ ಸ್ಥಾನದಲ್ಲಿದ್ದ ಚಿಕ್ಕೋಡಿ 13 ನೇ ಸ್ಥಾನ ಪಡೆದಿವೆ. ಯಾದಗಿರಿ ಜಿಲ್ಲೆ ಕಡೇ ಸ್ಥಾನದಲ್ಲಿದೆ.
ಕ್ರಾಂತಿಕಾರಿ ಹೆಜ್ಜೆ: ‘ಈ ಹಿಂದೆ ಆಯಾ ಜಿಲ್ಲೆಯ ಒಟ್ಟು ವಿದ್ಯಾರ್ಥಿಗಳ ಉತ್ತೀರ್ಣದ ಆಧಾರದ ಮೇಲೆ ರ್ಯಾಂಕಿಂಗ್ ನೀಡಲಾಗುತ್ತಿತ್ತು. ಆದರೆ, ಗುಣಾತ್ಮಕ ಫಲಿತಾಂಶಕ್ಕೆ ಒತ್ತು ನೀಡುತ್ತಿರಲಿಲ್ಲ. ಉತ್ತೀರ್ಣ ಪ್ರಮಾಣ, ವಿದ್ಯಾರ್ಥಿಗಳು ಪಡೆದ ಸರಾಸರಿ ಅಂಕಗಳಿಕೆ ಮತ್ತು ಗುಣಾತ್ಮಕ ಫಲಿತಾಂಶಕ್ಕೆ ಸಮಾನ ಮೌಲ್ಯನೀಡಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಎಂ.ಟಿ.ರೇಜು ತಿಳಿಸಿದರು.
ರ್ಯಾಂಕಿಂಗ್ ನೀಡಿಕೆ ಬದಲಾವಣೆ
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲಾವಾರು ರ್ಯಾಂಕಿಂಗ್ ನೀಡಿಕೆಯಲ್ಲಿ ಈ ವರ್ಷ ದಿಂದ ಬದಲಾವಣೆ ಮಾಡ ಲಾಗಿದೆ. ಇದಕ್ಕಾಗಿ ಮೂರು ಮಾನದಂಡ ಗಳನ್ನು ಅನುಸರಿಸಲಾಗಿದೆ. ಅವುಗಳೆಂದರೆ; ಉತ್ತೀರ್ಣ ಪ್ರಮಾಣ, ವಿದ್ಯಾರ್ಥಿಗಳು ಪಡೆದ ಸರಾಸರಿ ಅಂಕಗಳಿಕೆ ಮತ್ತು ಗುಣಾತ್ಮಕ ಫಲಿತಾಂಶ. ಪ್ರತಿಯೊಂದು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಉತ್ತೀರ್ಣ ಪ್ರಮಾಣ, ಉತ್ತೀರ್ಣರಾದವರು ತೆಗೆದುಕೊಂಡ ಸರಾಸರಿ ಅಂಕಗಳು ಮತ್ತು ಇವರಲ್ಲಿ ಶೇ 60 ಕ್ಕೂ ಹೆಚ್ಚು ಅಂಕಗಳ ಸರಾಸರಿಯನ್ನು ಲೆಕ್ಕ ಹಾಕಿದಾಗ ಬರುವ ಶೇಕಡಾವಾರು ಪ್ರಮಾಣದ ಆಧಾರದಲ್ಲಿ ಜಿಲ್ಲೆಗಳ ರ್ಯಾಂಕಿಂಗ್ನಿರ್ಧರಿಸಲಾಗಿದೆ.
ಚಾಮರಾಜನಗರ:ಜಿಲ್ಲೆಗೆ 15ನೇ ಸ್ಥಾನ ಲಭಿಸಿದೆ. ಹೋದ ವರ್ಷ 24ನೇ ಸ್ಥಾನ ಗಳಿಸಿತ್ತು. ಈ ಬಾರಿ ಜಿಲ್ಲೆಯಲ್ಲಿ 80.58% ಫಲಿತಾಂಶ ದಾಖಲಾಗಿದೆ.
ತುಮಕೂರು: ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಶೇ 84.81 ಫಲಿತಾಂಶ ಪಡೆಯುವ ಮೂಲಕ 11ನೇ ಸ್ಥಾನ ಹಾಗೂ ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ಶೇ 79 ಫಲಿತಾಂಶ ಪಡರಯವ ಮೂಲಕ18ನೇ ಸ್ಥಾನ ಪಡೆದಿದೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಎರಡೂ ಶೈಕ್ಷಣಿಕ ಜಿಲ್ಲೆಯಲ್ಲಿ ಈ ಬಾರಿ ಫಲಿತಾಂಶ ಕಡಿಮೆ ಆಗಿದೆ.
ಚಿಕ್ಕಮಗಳೂರು:ಜಿಲ್ಲೆ ಶೇ 82.76 ಫಲಿತಾಂಶ ದಾಖಲಿಸಿದ್ದು, ರಾಜ್ಯದಲ್ಲಿ 14ನೇ ಸ್ಥಾನ ಪಡೆದಿದೆ.ಕಳೆದ ಬಾರಿ ಶೇ 72.47 ಫಲಿತಾಂಶ ದಾಖಲಿಸಿ 26 ನೇ ಸ್ಥಾನದಲ್ಲಿತ್ತು.ಈ ಬಾರಿ ಜಿಲ್ಲೆ 12 ಸ್ಥಾನ ಮೇಲೇರಿದೆ.
ಬಳ್ಳಾರಿ: ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎಸ್ಎಸ್ಎಲ್ಸಿಯಲ್ಲಿ ಬಳ್ಳಾರಿ ಜಿಲ್ಲೆಯ ಫಲಿತಾಂಶ ಕುಸಿತ ಕಂಡಿದೆ. ಪ್ರಸಕ್ತ ಸಾಲಿನಲ್ಲಿ ಶೇ 68.07ರಷ್ಟು ಫಲಿತಾಂಶ ಪಡೆದು, 24ನೇ ಸ್ಥಾನ ಪಡೆದಿರುವ ಜಿಲ್ಲೆ, ಹೋದ ವರ್ಷ ಶೇ 82.73 ಫಲಿತಾಂಶದೊಂದಿಗೆ 12ನೇ ಸ್ಥಾನದಲ್ಲಿತ್ತು.
ಎಸ್ಎಂಎಸ್ ಫಲಿತಾಂಶ: ಕಳೆದ ಬಾರಿಯಂತೆ ಈ ಬಾರಿಯೂ ಇಲಾಖೆ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಫಲಿತಾಂಶವನ್ನು ರವಾನಿಸಲಿದೆ.‘ಪರೀಕ್ಷೆಗೆ ಹಾಜರಾಗಿರುವ 8.41 ಲಕ್ಷ ವಿದ್ಯಾರ್ಥಿಗಳಿಗೂ ಸಂದೇಶ ಕಳುಹಿಸುತ್ತೇವೆ’ ಎಂದುವಿ. ಸುಮಂಗಲಾ ತಿಳಿಸಿದರು.
http://sslc.kar.nic.inಮತ್ತುhttp://karresults.nic.inವೆಬ್ಸೈಟ್ನಲ್ಲಿ ಫಲಿತಾಂಶ ಪಡೆಯಬಹುದಾಗಿದೆ. ಮೇ 1ರಂದು ಸಾರ್ವಜನಿಕ ರಜೆ ಇರುವುದರಿಂದ ಇಂದೇ ಮಧ್ಯಾಹ್ನ 3ಗಂಟೆಗೆ ಶಾಲೆಯಲ್ಲಿಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.