ಬೆಂಗಳೂರು: ‘ಮುಂಗಾರು ಅವಧಿಯಲ್ಲಿನ ಬರಗಾಲ ಘೋಷಣೆಯನ್ನು ರಾಜ್ಯ ಸರ್ಕಾರ ಸಕಾಲದಲ್ಲಿ ಮಾಡದಿರುವುದೇ ಕೇಂದ್ರದಿಂದ ಪರಿಹಾರ ಬಿಡುಗಡೆ ವಿಳಂಬವಾಗಲು ಕಾರಣ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ದೂರಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಬೇಗ ಬರ ಘೋಷಣೆ ಮಾಡಿದ್ದರೆ, ಕೇಂದ್ರವೂ ಇನ್ನಷ್ಟು ಮುಂಚಿತವಾಗಿ ಅಧ್ಯಯನ ತಂಡ ಕಳುಹಿಸುತ್ತಿತ್ತು. ಈಗಲೂ ಹಿಂಗಾರು ಅವಧಿಯ ಬರಗಾಲದ ಕುರಿತೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದರು.
ಬರ ಪರಿಹಾರ ವಿತರಣೆಯಲ್ಲಿ ರಾಜ್ಯ ಸರ್ಕಾರ ಸರಿಯಾಗಿ ಕ್ರಮ ಕೈಗೊಂಡಿಲ್ಲ. ಪ್ರತಿ ರೈತರಿಗೆ ₹ 2,000 ಮಾತ್ರ ವಿತರಿಸಲಾಗಿದೆ. ಕೇಂದ್ರ ಸರ್ಕಾರದಿಂದ ಬಂದ ಹಣದಲ್ಲೇ ಪರಿಹಾರ ನೀಡಲಾಗಿದೆ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಂಸತ್ತಿಗೆ ಹೋಗಬೇಕಿತ್ತು:
‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಎದುರು ಕೈಕಟ್ಟಿ ನಿಂತುಕೊಂಡು ಉತ್ತರ ಕೊಡಬೇಕಿತ್ತೆ? ಕೃಷ್ಣ ಅವರು ಬುದ್ಧಿವಂತರಾಗಿದ್ದರೆ ಸಂಸತ್ತಿಗೆ ಹೋಗಬೇಕಿತ್ತು’ ಎಂದು ಅಶೋಕ ಹೇಳಿದರು.
‘ಕೇಂದ್ರ ಹಣಕಾಸು ಸಚಿವರನ್ನು ಸಂತೆ ಭಾಷಣಕ್ಕೆ ಕರೆಯುವುದಲ್ಲ. ದೆಹಲಿಗೆ ಹೋಗಿ ರಾಜ್ಯ ಸರ್ಕಾರದ ಮನವಿಯನ್ನು ಅವರಿಗೆ ಸಲ್ಲಿಸಬೇಕಿತ್ತು’ ಎಂದರು.
ಎನ್ಡಿಎ ಸರ್ಕಾರದ ಅವಧಿಯಲ್ಲಿ ತೆರಿಗೆ ಪಾಲು ಮತ್ತು ಅನುದಾನದ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಕಾಂಗ್ರೆಸ್ನವರ ಆರೋಪದಲ್ಲಿ ಹುರುಳಿಲ್ಲ. ಎನ್ಡಿಎ ಸರ್ಕಾರದ ಅವಧಿಯಲ್ಲೇ ರಾಜ್ಯಕ್ಕೆ ಹೆಚ್ಚು ಅನುದಾನ, ನೆರವು ದೊರಕಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.