ಬೆಂಗಳೂರು:ಮಾನವ-ಚಿರತೆ ಸಂಘರ್ಷ ಕಡಿಮೆಗೊಳಿಸಲು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ರೂಪಿಸಿರುವ ಮಾರ್ಗಸೂಚಿಗಳು ತನ್ನ ಪ್ರಮುಖ ಉದ್ದೇಶಗಳನ್ನು ಸಾಧಿಸಲು ವಿಫಲವಾಗಿವೆ. ಚಿರತೆ ಸೆರೆಹಿಡಿಯುವ ಪ್ರಕರಣಗಳು ಇನ್ನೂ ಕಡಿಮೆಯಾಗಿಲ್ಲಎಂದು ಅಧ್ಯಯನವೊಂದು ಹೇಳಿದೆ.
ನೇಚರ್ ಫೌಂಡೇಷನ್ ಕನ್ಸರ್ವೇಷನ್ ಫೌಂಡೇಷನ್ನ ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ನೇತೃತ್ವದ ತಂಡ ಈ ಅಧ್ಯಯನ ನಡೆಸಿದೆ. ಅಧ್ಯಯನ ವರದಿಯು ‘ಪಾಲಿಸಿ ಟು ಆನ್-ಗ್ರೌಂಡ್ ಆಕ್ಷನ್: ಎವಲ್ಯೂಏಟಿಂಗ್ ಎ ಕಾನ್ಫ್ಲಿಕ್ಟ್ ಪಾಲಿಸಿ ಗೈಡ್ಲೈನ್ ಫಾರ್ ಲೆಪರ್ಡ್ಸ್ ಇನ್ ಇಂಡಿಯಾ' ಎಂಬ ಶೀರ್ಷಿಕೆಯಡಿ ‘ಜರ್ನಲ್ ಆಫ್ ಇಂಟರ್ನ್ಯಾಷನಲ್ ವೈಲ್ಡ್ಲೈಫ್ ಲಾ ಆ್ಯಂಡ್ ಪಾಲಿಸಿ’ಯಲ್ಲಿ ಪ್ರಕಟವಾಗಿದೆ.
‘ಮಾನವ-ಚಿರತೆ ನಿರ್ವಹಣೆಗಾಗಿ ಮಾರ್ಗಸೂಚಿಗಳು’ ಎಂಬ ಕಾರ್ಯನೀತಿಯನ್ನು 2010ರ ಏಪ್ರಿಲ್ನಲ್ಲಿ ಬಿಡುಗಡೆ ಮಾಡಲಾಗಿದೆ.ರಾಜ್ಯದಲ್ಲಿ 2009-2016ರಲ್ಲಿ 357 ಚಿರತೆಗಳನ್ನು ಸೆರೆಹಿಡಿಯಲಾಗಿದೆ. ಶೇ 79ರಷ್ಟು ಚಿರತೆಗಳನ್ನುಮೈಸೂರು, ಉಡುಪಿ, ಹಾಸನ, ತುಮಕೂರು, ರಾಮನಗರ, ಬಳ್ಳಾರಿ, ಕೊಪ್ಪಳ ಮತ್ತು ಮಂಡ್ಯ ಜಿಲ್ಲೆಯಲ್ಲಿ ಸೆರೆಹಿಡಿಯಲಾಗಿದೆ.
ಹೀಗೆಸೆರೆಹಿಡಿದ ಶೇ 85.4ರಷ್ಟು (268) ಚಿರತೆಗಳನ್ನು ಇತರ ಅರಣ್ಯಗಳಿಗೆ ಸ್ಥಳಾಂತರಿಸಲಾಗಿದೆ. ಶೇ 10.8ರಷ್ಟು (34) ಚಿರತೆಗಳನ್ನು ಮೃಗಾಲಯ ಅಥವಾ ಪುನರ್ವಸತಿ ಕೇಂದ್ರಗಳಿಗೆ ತೆಗೆದುಕೊಂಡು ಹೋಗಲಾಗಿದೆ ಮತ್ತು ಶೇ 3.8ರಷ್ಟು ಅಂದರೆ, 12 ಚಿರತೆಗಳು ಸೆರೆಹಿಡಿಯುವ ಸಂದರ್ಭದಲ್ಲಿ ಮೃತಪಟ್ಟಿವೆ.
ಕೇಂದ್ರ ಸರ್ಕಾರ ಈ ಕುರಿತು ನಿಯಮಾವಳಿ ರೂಪಿಸಿದ ನಂತರ, ಚಿರತೆ ಹಿಡಿಯುವ ಪ್ರಮಾಣ ಮೂರು ಪಟ್ಟು ಹೆಚ್ಚಿದೆ. ಚಿರತೆಗಳನ್ನು ಸ್ಥಳಾಂತರಿಸುವ ಪ್ರಮಾಣ ಕೂಡ ಮೂರು ಪಟ್ಟು ಹೆಚ್ಚಾಗಿರುವುದನ್ನು ನೋಡಿದರೆ, ಈನಿಯಮಾವಳಿಗಳಿಂದ ಯಾವುದೇ ಸಕಾರಾತ್ಮಕ ಪರಿಣಾಮವಾಗಿಲ್ಲ ಎಂದು ಅಧ್ಯಯನ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.