ADVERTISEMENT

‘ಕೋವಿಡ್ ಲಸಿಕೆ: ಟೀಕೆಯಿಂದ ವಿಜ್ಞಾನಿಗಳಿಗೆ ಅಗೌರವ’

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 16:08 IST
Last Updated 5 ಜನವರಿ 2021, 16:08 IST
ಡಾ.ಕೆ.ಸುಧಾಕರ್‌ 
ಡಾ.ಕೆ.ಸುಧಾಕರ್‌    

ಬೆಂಗಳೂರು: ‘ದೇಶದ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯ ಬಗ್ಗೆ ವಿನಾಕಾರಣ ಟೀಕೆ ಮಾಡುವ ಮೂಲಕ ವಿಜ್ಞಾನಿಗಳಿಗೆ ಅಗೌರವ ತೋರಬಾರದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದ್ದಾರೆ.

ಲಸಿಕೆಯ ಬಗ್ಗೆ ವಿರೋಧ ಪಕ್ಷದವರು ಟೀಕಿಸಿದ ಕಾರಣ ಅವರು ಸರಣಿ ಟ್ವೀಟ್ ಮಾಡಿದ್ದು, ‘ಸಾಂಕ್ರಾಮಿಕ ಕಾಯಿಲೆಯಾದ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಈ ಕಾಯಿಲೆಗೆ ಭಾರತ್ ಬಯೋಟೆಕ್ ಕಂಪನಿಯು ‘ಕೊವ್ಯಾಕ್ಸಿನ್’ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಈ ಕಂಪನಿಯು ಹೆಸರುವಾಸಿಯಾಗಿದ್ದು, ನಂಬಿಕೆಗೆ ಅರ್ಹವಾಗಿದೆ. ಎಚ್‌1 ಎನ್‌1, ರೋಟಾವೈರಸ್, ರೇಬಿಸ್, ಚಿಕೂನ್ ಗುನ್ಯಾ, ಝೀಕಾ ಸೇರಿದಂತೆ 16 ರೋಗಗಳಿಗೆ ಲಸಿಕೆ ಆವಿಷ್ಕರಿಸಿದೆ. ಯುನಿಸೆಫ್ ಸಹಯೋಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ150ಕ್ಕೂ ಹೆಚ್ಚು ದೇಶಗಳಲ್ಲಿ 400 ಕೋಟಿ ಡೋಸ್ ಲಸಿಕೆಗಳನ್ನು ವಿತರಣೆ ಮಾಡಿದೆ’ ಎಂದು ತಿಳಿಸಿದ್ದಾರೆ.

‘ಕೊವ್ಯಾಕ್ಸಿನ್‌ನ 3ನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ 24 ಸಾವಿರ ಮಂದಿ ಭಾಗವಹಿಸಿದ್ದು, ಈ ಬಗ್ಗೆ ಶೀಘ್ರವೇ ದತ್ತಾಂಶ ಲಭ್ಯವಾಗಲಿದೆ. ಲಸಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ ಬಳಿಕ ಅದನ್ನು ಅಧಿಕೃತ ಎನ್ನಲಾಗುತ್ತದೆ. ಈ ಲಸಿಕೆಯ ಅಡ್ಡ ಪರಿಣಾಮ ಶೇ 15ಕ್ಕಿಂತಲೂ ಕಡಿಮೆಯಿದೆ. ಇದು ಬಹಳ ಸುರಕ್ಷಿತ ಲಸಿಕೆಯಾಗಿದೆ. ಹಾಗಾಗಿ ಯಾರೂ ಕೂಡ ಲಸಿಕೆಯ ಬಗ್ಗೆ ವಿನಾಕಾರಣ ಟೀಕಿಸಬಾರದು. ಈ ಮೂಲಕ ವಿಜ್ಞಾನಿಗಳ ಪರಿಶ್ರಮಕ್ಕೆ ಧಕ್ಕೆ ತರಬಾರದು’ ಎಂದು ಮನವಿ ಮಾಡಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.