ADVERTISEMENT

ಶಿಕ್ಷಕರ ಸಂಬಳ ಬಿಡುಗಡೆಗೆ ಆದೇಶ: ದಂಡದ ಎಚ್ಚರಿಕೆ ನೀಡಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 14:14 IST
Last Updated 22 ನವೆಂಬರ್ 2025, 14:14 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಯಾರನ್ನೇ ಆಗಲಿ, ವಿಶೇಷವಾಗಿ ಸಾರ್ವಜನಿಕ ಸೇವಾ ವಲಯಗಳಲ್ಲಿ ದುಡಿಯುವವರಿಗೆ ಸೂಕ್ತ ವೇತನ ನೀಡದೆ ಕೆಲಸ ಮಾಡಿ ಎಂದು ಬಲವಂತ ಮಾಡುವಂತಿಲ್ಲ ಎಂಬ ಸ್ಥಾಪಿತ ಕಾನೂನನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲನೆ ಮಾಡಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿದೆ.

ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್‌, ಚಾತಕಪಕ್ಷಿಗಳಂತೆ ಕಾಯುತ್ತಿರುವ ಶಿಕ್ಷಕರ ಸಂಬಳವನ್ನು ಕೂಡಲೇ ಬಿಡುಗಡೆ ಮಾಡುವಂತೆ ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆಗೆ ನಿರ್ದೇಶಿಸಿದೆ.

‘ಕಳೆದ 19 ತಿಂಗಳಿನಿಂದ ತಡೆ ಹಿಡಿಯಲಾಗಿರುವ ನಮ್ಮ ಸಂಬಳವನ್ನು ಬಿಡುಗಡೆ ಮಾಡಲು ಧಾರವಾಡದ ಪ್ರಾಥಮಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಿಗೆ ನಿರ್ದೇಶಿಸಬೇಕು’ ಎಂದು ಕೋರಿ ಅನಿಲ್‌ ಎಂ.ಕಾನವಾಡೆ ಸೇರಿದಂತೆ ನಾಲ್ವರು ಶಿಕ್ಷಕರು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ADVERTISEMENT

‘ಪ್ರತಿಯೊಬ್ಬ ಅರ್ಜಿದಾರರಿಗೆ ಲಭ್ಯವಾಗಬೇಕಿರುವ ₹12 ಲಕ್ಷಕ್ಕೂ ಹೆಚ್ಚಿನ ಸಂಬಳ ಬಾಕಿಯನ್ನು ಡಿಸೆಂಬರ್ 4ರ ಒಳಗಾಗಿ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ, ಪ್ರತಿಯೊಬ್ಬ ಅರ್ಜಿದಾರರಿಗೆ ವ್ಯಾಜ್ಯದ ವೆಚ್ಚವಾಗಿ ₹25 ಸಾವಿರ ದಂಡ ಕಟ್ಟಬೇಕಾಗುತ್ತದೆ’ ಎಂದು ನ್ಯಾಯಪೀಠ ಸರ್ಕಾರಕ್ಕೆ ಎಚ್ಚರಿಸಿದೆ.

‘ರಿಟ್ ಅರ್ಜಿ ಪ್ರಕ್ರಿಯೆಗಳು ಬಾಕಿ ಇರುವ ಕಾರಣ ಸಂಬಳ ನೀಡಿಲ್ಲ ಎಂಬ ಸರ್ಕಾರದ ಪ್ರತಿವಾದ ಸಂಪೂರ್ಣ ಅಸಮರ್ಥನೀಯ. ಪರಿಶ್ರಮಕ್ಕೆ ತಕ್ಕ ಕೂಲಿ ನೀಡದೆ ಅಥವಾ ಜಬರ್‌ದಸ್ತಿನಿಂದ ಕೆಲಸ ಮಾಡಿಸಿಕೊಳ್ಳುವ ಬೇಗಾರ್ ಪದ್ಧತಿಯು ಅನಿಷ್ಟದ ಪ್ರತೀಕ. ಯಾವುದೇ ಕ್ಷೇತ್ರದಲ್ಲಿ ಯಾರನ್ನೇ ಆಗಲಿ ವೇತನ ರಹಿತ ಕಾರ್ಮಿಕರ ನೊಗದಡಿಯಲ್ಲಿ ಕೆಲಸ ಮಾಡಿ ಎಂದು ಒತ್ತಾಯಿಸುವುದು ಸಲ್ಲ’ ಎಂದು ನ್ಯಾಯಪೀಠ ಕಿಡಿ ಕಾರಿದೆ.

‘ಅರ್ಜಿದಾರರು ಪ್ರತಿವಾದಿ ದೇಶಭೂಷಣ ಶಾಲೆಯಲ್ಲಿ 2023ರಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರೂ, ಮೇ 2024ರಿಂದ ಸುಮಾರು 19 ತಿಂಗಳು ವೇತನ ಪಡೆದಿಲ್ಲ’ ಎಂಬುದು ಆಘಾತಕಾರಿ ವಿಚಾರ. ‘ಸಂಬಳವಿಲ್ಲದೆ ಕೆಲಸ ಮಾಡಲು ಬಲವಂತಪಡಿಸುವುದು ಸಂವಿಧಾನದ 23ನೇ ವಿಧಿಯ ಸ್ಪಷ್ಟ ಉಲ್ಲಂಘನೆ’ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

‘ದೇಶಭೂಷಣ ಶಾಲೆಯು ಸರ್ಕಾರದಿಂದ ಅನುದಾನ ಪಡೆಯುತ್ತಿದೆ. ಕಾನೂನಾತ್ಮಕ ವ್ಯಾಜ್ಯಗಳು ಬಗೆಹರಿದಿಲ್ಲ ಎಂಬ ಸಬೂಬು ತೋರಿಸಿ ಸಂಬಳ ತಡೆಹಿಡಿದಿರುವುದು ಅಕ್ಷಮ್ಯ. ಅರ್ಜಿದಾರರು ನಾಲ್ಕನೆಯ ಸುತ್ತಿನಲ್ಲಿ ಹೈಕೋರ್ಟ್‌ ಮೆಟ್ಟಿಲೇರಿ ಕಾನೂನಿನ ಹೋರಾಟ ನಡೆಸುತ್ತಿರುವುದು ವಿಷಾದಕರ’ ಎಂದ ನ್ಯಾಯಪೀಠ, ಮಾನವ ಶ್ರಮದ ನೈತಿಕ ನಿಯಮಗಳನ್ನು ತೀರ್ಪಿನಲ್ಲಿ ನಮೂದಿಸಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲೆ ವೈಭವಿ ಇನಾಂದಾರ್‌ ವಾದ ಮಂಡಿಸಿದ್ದರು.

ಚಿಕ್ಕೋಡಿ ತಾಲ್ಲೂಕು ಕೊಥಳಿಯ ದೇಶಭೂಷಣ ಪ್ರೌಢಶಾಲೆಯಲ್ಲಿ ದುಡಿಯುತ್ತಿರುವ ಇಂಗಳಿ ಗ್ರಾಮದ ಸಹಾಯಕ ಶಿಕ್ಷಕ ಅನಿಲ್‌ ಎಂ.ಕಾನವಾಡೆ, ರಾಯಬಾಗ ತಾಲ್ಲೂಕಿನ ಮುಗಳಖೋಡದ ದೈಹಿಕ ಶಿಕ್ಷಕ ಜಿನೇಂದ್ರ ಆರ್.ಬಾಬಣ್ಣವರ, ರಾಹುಲ್ ಎಸ್.ಬಾಬಣ್ಣವರ ಮತ್ತು ಚಿಕ್ಕೋಡಿಯ ಪೂಜಾ ಎಸ್.ಪಾಟೀಲ ಅವರು ಈ ಅರ್ಜಿ ಸಲ್ಲಿಸಿದ್ದರು.

ಆರ್ಥಿಕ ಬಲವಂತವು ಆಯ್ಕೆಯ ಎಲ್ಲಾ ಪರ್ಯಾಯಗಳನ್ನು ಕಸಿದುಕೊಳ್ಳುತ್ತದೆ. ಬಡವನೊಬ್ಬ ಪಡೆಯುವ ಸಂಬಳ ಕನಿಷ್ಠ ವೇತನಕ್ಕಿಂತ ಕಡಿಮೆಯಿದ್ದರೂ ಶ್ರಮ ಅಥವಾ ಸೇವೆ ಸಲ್ಲಿಸುವಂತೆ ಅವನನ್ನು ಅನಿವಾರ್ಯಗೊಳಿಸುತ್ತದೆ.
ನ್ಯಾ.ಎಂ.ನಾಗಪ್ರಸನ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.