ಸುದೀರ್ಘ ಲಾಕ್ಡೌನ್ ಬಳಿಕ ರಾಜ್ಯದ ವಿವಿಧೆಡೆ ದೇಗುಲಗಳಿಗೆ ಇಂದಿನಿಂದ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಮೊದಲ ದಿನ ಹೆಚ್ಚೇನೂ ಜನ ಸಂದಣಿ ಇರಲಿಲ್ಲ.
ಸಿದ್ಧಾರೂಢರ ದರ್ಶನಕ್ಕೆ ಅವಕಾಶ
ಹುಬ್ಬಳ್ಳಿ: ಇಲ್ಲಿನ ಸದ್ಗುರು ಸಿದ್ಧಾರೂಢ ಮಠದಲ್ಲಿ ಎರಡೂವರೆ ತಿಂಗಳ ನಂತರ ಸೋಮವಾರ ಬೆಳಗ್ಗೆಯಿಂದ ಸಿಧ್ಧಾರೂಢರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಬೆಳಿಗ್ಗೆ 6.30 ರಿಂದಲೇ ಭಕ್ತರು ದರ್ಶನಕ್ಕೆ ಬರಲಾರಂಭಿಸಿದ್ದಾರೆ.
ಅಂತರ ಕಾಪಾಡಿಕೊಳ್ಳಲು ಬಾಕ್ಸ್ ಮಾರ್ಕ್ ಮಾಡಲಾಗಿದೆ. ಎಲ್ಲ ಭಕ್ತರ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದ್ದು, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಸಿದ್ಧಾರೂಢರ ಗದ್ದುಗೆ ಇರುವ ಗರ್ಭಗುಡಿಗೆ ಪ್ರವೇಶವಿಲ್ಲ. ಹೊರಗಡೆಯಿಂದಲೇ ದರ್ಶನ ಪಡೆಯಬಹುದಾಗಿದೆ.
ಹೂ, ಹಣ್ಣು, ಕಾಯಿ ಒಡೆಯುವುದಕ್ಕೆ ಅವಕಾಶವಿಲ್ಲ. ಪ್ರಸಾದ ವಿತರಣೆಯೂ ಇರುವುದಿಲ್ಲ. ಭಕ್ತರು ಅಂತರ ಕಾಪಾಡಿಕೊಂಡು ದರ್ಶನ ಪಡೆಯಬೇಕು ಎಂದು ಮಠದ ಟ್ರಸ್ಟಿಗಳು ಕೋರಿದ್ದಾರೆ.
ಬೆಂಗಳೂರು ದೇಗುಲಗಳಲ್ಲಿ ವಿಶೇಷ ಪೂಜೆ
ಬೆಂಗಳೂರು:ನಗರದ ಎಲ್ಲದೇವಸ್ಥಾನಗಳಲ್ಲೂ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.ಗವಿಗಂಗಾಧರೇಶ್ವಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ನಡೆಯಿತು. ಆದರೆ ಭಕ್ತರಿಗೆ ಅಭಿಷೇಕ ನೋಡಲು ಅವಕಾಶ ಸಿಗಲಿಲ್ಲ.
8 ಗಂಟೆಯಿಂದ 11:30 ರವರೆಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ.ಮಾಸ್ಕ್, ಅಂತರ, ಟೆಂಪರೇಚರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ.
ಚಾಮುಂಡಿಬೆಟ್ಟಕ್ಕೆ ಜಿ.ಟಿ.ದೇವೇಗೌಡ
65 ವರ್ಷ ದಾಟಿದ ಶಾಸಕ ಜಿ.ಟಿ.ದೇವೇಗೌಡ ಅವರಿಗೂ ಚಾಮುಂಡಿಬೆಟ್ಟದಲ್ಲಿ ಅವಕಾಶ ಮಾಡಿಕೊಡಲಾಗಿದೆ. ರಾಜಕಾರಣಿಗಳು ಪ್ರವೇಶಿಸಿದ್ದ ವೇಳೆ ಬೆಂಬಲಿಗರು ಅಂತರ ಕಾಯ್ದುಕೊಳ್ಳದೇ ದೇಗುಲ ಪ್ರವೇಶಿಸಿದರು. ಈ ವೇಳೆ ಮಾಧ್ಯಮದವರ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.