ಬೆಂಗಳೂರು: ಎಚ್ಎಎಲ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಮಾಡಲು ನುಗ್ಗಿದ್ದ ಕಳ್ಳನೊಬ್ಬ, ಅದೇ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
‘ಆತ್ಮಹತ್ಯೆಗೆ ಯತ್ನಿಸಿ ತೀವ್ರವಾಗಿ ಗಾಯಗೊಂಡಿದ್ದ ಸ್ವಸ್ತಿಕ್ ಎಂಬಾತನನ್ನು ಮನೆಯ ಮಾಲೀಕರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಪೊಲೀಸರು ಹೇಳಿದರು.
ಆಗಿದ್ದೇನು?
‘ಗುತ್ತಿಗೆದಾರ ಕೆ.ಎಂ.ಮೋಹನ್ ಎಂಬುವರುವಿಭೂತಿಪುರದಲ್ಲಿ ಕುಟುಂಬದ ಜೊತೆ ವಾಸವಿದ್ದಾರೆ. ಅವರ ಗಮನಕ್ಕೆ ಬಾರದಂತೆ ಆರೋಪಿ ಸ್ವಸ್ತಿಕ್ ಜ. 1ರಂದು ಬೆಳಿಗ್ಗೆ ಮನೆಯೊಳಗೆ ಹೋಗಿ ಅಡಗಿ ಕುಳಿತಿದ್ದ. ಅಂದು ಹೊಸ ವರ್ಷವಾಗಿದ್ದರಿಂದ ಮೋಹನ್ ಹಾಗೂ ಕುಟುಂಬದವರು ದೇವಸ್ಥಾನಕ್ಕೆ ಹೋಗಿದ್ದರು. ಅದೇ ವೇಳೆ ಬಾಗಿಲು ಲಾಕ್ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.
‘ಮನೆಯ ಬಾಗಿಲು ಸ್ವಯಂಚಾಲಿತವಾಗಿತ್ತು. ಅದು ಸ್ವಸ್ತಿಕ್ಗೆ ಗೊತ್ತಿರಲಿಲ್ಲ. ಮನೆಯಲ್ಲೆಲ್ಲ ಹುಡುಕಾಡಿದ್ದ ಸ್ವಸ್ತಿಕ್, ಕೆಲ ಹೊತ್ತಿನ ಬಳಿಕ ಮನೆಯಿಂದ ಹೊರಹೋಗಲು ಬಾಗಿಲು ಬಳಿ ಬಂದಿದ್ದ. ಆದರೆ, ಬಾಗಿಲು ತೆರೆಯಲು ಸಾಧ್ಯವಾಗಿರಲಿಲ್ಲ. ಮನೆಯ ಎಲ್ಲ ಬಾಗಿಲುಗಳು ಸಹ ಲಾಕ್ ಆಗಿದ್ದವು’
‘ಕೆಲ ಹೊತ್ತು ಕಾಯುತ್ತ ಮನೆಯೊಳಗೆ ಕುಳಿತಿದ್ದ. ಸಂಜೆಯಾಗುತ್ತಿದ್ದಂತೆ ಆತನಿಗೆ ಆತಂಕ ಶುರುವಾಗಿತ್ತು. ಅವಾಗಲೇ ಮನೆಯ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿದ್ದ. ಮನೆಯಲ್ಲಿ ಹೊಗೆ ಆವರಿಸಿತ್ತು. ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಪೈಪ್ ಕಿತ್ತು ಬೆಂಕಿ ಹಚ್ಚಲು ಯತ್ನಿಸಿದ್ದ. ಕೊಠಡಿಯೊಂದರ ಫ್ಯಾನ್ಗೆ ಬಟ್ಟೆ ಕಟ್ಟಿ ನೇಣು ಹಾಕಿಕೊಳ್ಳಲು ಯತ್ನಿಸಿ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ಅಷ್ಟರಲ್ಲೇ ಮಾಲೀಕ ಮೋಹನ್ ಮನೆಗೆ ವಾಪಸು ಬಂದು ಬಾಗಿಲು ತೆರೆದಿದ್ದರು’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.