ADVERTISEMENT

ಸಾಹಿತಿ ಭೈರಪ್ಪ ವಿರುದ್ಧ ಮೂರು ದೂರು

ಭಾಷಣದಲ್ಲಿ ದ್ರೌಪದಿ ಅವಹೇಳನದ ಆರೋಪ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 16:30 IST
Last Updated 16 ಮಾರ್ಚ್ 2021, 16:30 IST
   

ಬೆಂಗಳೂರು: ಸಾಹಿತಿ ಎಸ್‌.ಎಲ್‌. ಭೈರಪ್ಪ ಫೆಬ್ರುವರಿ 21ರಂದು ಮೈಸೂರಿನ ಸಮಾರಂಭವೊಂದರಲ್ಲಿ ದ್ರೌಪದಿಯ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮೂರು ದೂರುಗಳು ಸಲ್ಲಿಕೆಯಾಗಿದ್ದು, ವಿಚಾರಣಾ ಹಂತದಲ್ಲಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಸದಸ್ಯ ಪಿ.ಆರ್‌. ರಮೇಶ್‌ ವಿಧಾನ ಪರಿಷತ್‌ನಲ್ಲಿ ಶೂನ್ಯವೇಳೆಯಲ್ಲಿ ಮಾಡಿದ್ದ ಪ್ರಸ್ತಾಪಕ್ಕೆ ಮಂಗಳವಾರ ಉತ್ತರ ನೀಡಿದ ಗೃಹ ಸಚಿವರು, ‘ಭೈರಪ್ಪ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ದೇವನಹಳ್ಳಿ ಹಾಗೂ ಬೆಂಗಳೂರು ನಗರದ ಸಿದ್ಧಾಪುರ ಪೊಲೀಸ್‌ ಠಾಣೆಗಳಿಗೆ ದೂರುಗಳು ಬಂದಿವೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್‌ ಅವರಿಗೂ ಒಂದು ದೂರು ಬಂದಿದೆ’ ಎಂದು ಮಾಹಿತಿ ನೀಡಿದ್ದಾರೆ.

ದೇವನಹಳ್ಳಿ ತಾಲ್ಲೂಕು ತಿಗಳರ ಸಂಘದಿಂದ ದೇವನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ರಾಜ್ಯ ಸರ್ಕಾರಿ ತಿಗಳ ನೌಕರರ/ ವೃತ್ತಿಪರರ ಸಂಘದ ಅಧ್ಯಕ್ಷರು ಸಿದ್ಧಾಪುರ ಠಾಣೆಗೆ ದೂರು ನೀಡಿದ್ದಾರೆ. ವೈ. ಜಗದೀಶ್‌ ಎಂಬುವವರು ಪೊಲೀಸ್‌ ಕಮಿಷನರ್‌ಗೆ ದೂರು ಸಲ್ಲಿಸಿದ್ದಾರೆ. ಎಲ್ಲವೂ ವಿಚಾರಣಾ ಹಂತದಲ್ಲಿವೆ. ಹಿಂದೆ ಇದೇ ರೀತಿಯ ದೂರುಗಳು ಬಂದ ಸಂದರ್ಭದಲ್ಲಿ ಕೈಗೊಂಡಿರುವ ಕ್ರಮಗಳ ಅನುಸಾರ ಈ ದೂರುಗಳನ್ನೂ ವಿಚಾರಣೆ ಮಾಡಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.