ADVERTISEMENT

ಹುಲಿಗೆ ಆರು ಜಾನುವಾರು ಬಲಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2018, 19:54 IST
Last Updated 27 ನವೆಂಬರ್ 2018, 19:54 IST

ಶಿರಸಿ: ತಾಲ್ಲೂಕಿನ ದೇವನಳ್ಳಿ ಪಂಚಾಯ್ತಿ ವ್ಯಾಪ್ತಿಯ ದೇವನಮನೆ ಸುತ್ತಲಿನ ಗ್ರಾಮಗಳಲ್ಲಿ 15 ದಿನಗಳಿಂದ ಅಲ್ಲಲ್ಲಿ ಕಾಣಿಸಿಕೊಂಡಿರುವುದು ಚಿರತೆಯಲ್ಲ, ಹುಲಿ ಎಂಬುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಈಗಾಗಲೇ ಆರು ಜಾನುವಾರುಗಳು ಹುಲಿಗೆ ಆಹಾರವಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಗ್ರಾಮಸ್ಥರು ಮಂಗಳವಾರ ಡಿಸಿಎಫ್ ಎನ್.ಡಿ.ಸುದರ್ಶನ್ ಅವರಿಗೆ ಮನವಿ ಸಲ್ಲಿಸಿ, ಹುಲಿಯನ್ನು ಹಿಡಿದು ಬೇರೆಡೆಗೆ ಸಾಗಿಸುವಂತೆ ವಿನಂತಿಸಿದ್ದಾರೆ.

‘ಹಗಲಿನಲ್ಲಿಯೂ ಹುಲಿ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತದೆ. ಹುಲಿ ಬಂದ ಮೇಲೆ, ಹುಲ್ಲುಗಾವಲು ಪ್ರದೇಶದಲ್ಲಿ ಓಡಾಡುತ್ತಿದ್ದ ಸ್ಥಳೀಯ ಅರಣ್ಯದ ಪ್ರಾಣಿಗಳು ಕಾಣಿಸಿಕೊಳ್ಳುತ್ತಿಲ್ಲ. ಈ ಹುಲಿ ಸ್ಥಳೀಯ ಅರಣ್ಯದ ವಾಸಿಯಲ್ಲವೆಂಬುದು ಇದರಿಂದ ಗೊತ್ತಾಗುತ್ತದೆ. ಇದನ್ನು ಹಿಡಿದು, ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಾಗಿಸಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

‘ಇಲಾಖೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಹುಲಿ ಸೆರೆಯಾಗಿಲ್ಲ. ಆದರೆ, ಹೆಜ್ಜೆ ಗುರುತು, ಸ್ಥಳೀಯರು ಹೇಳುವ ಮಾಹಿತಿ ಮೇಲೆ ಇದು ಹುಲಿಯೆಂದು ನಿರ್ಧರಿಸಲಾಗಿದೆ. ಇದನ್ನು ಹಿಡಿಯಲು ಹಿರಿಯ ಅಧಿಕಾರಿಗಳ ಅನುಮತಿ ಅಗತ್ಯ’ ಎಂದು ಸುದರ್ಶನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.