ADVERTISEMENT

ಲೈಂಗಿಕ ದೌರ್ಜನ್ಯ: ನ್ಯಾಯ ಒದಗಿಸದ ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 16:28 IST
Last Updated 1 ನವೆಂಬರ್ 2018, 16:28 IST
ಉಗ್ರಪ್ಪ
ಉಗ್ರಪ್ಪ   

ಬೆಂಗಳೂರು:‘ಮಹಿಳಾ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರಾಗಿದ್ದ ವಿ.ಎಸ್‌.ಉಗ್ರಪ್ಪ ಅವರು ನನ್ನ ಮಗಳ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯ ಒದಗಿಸದೇ, ಆರೋಪಿಗೆ ಸಹಕರಿಸಿದರು’ ಎಂದು ಮಮತಾ ಸಿಂಗ್‌ ಎಂಬುವವರು ದೂರಿದರು.

‘ಇಂತಹ ವ್ಯಕ್ತಿ ಜನಪ್ರತಿನಿಧಿ ಆಗಲು ಯೋಗ್ಯರಲ್ಲ. ಆದ್ದರಿಂದ, ಬಳ್ಳಾರಿ ಜನತೆ ಯೋಚಿಸಿ ಮತದಾನ ಮಾಡಬೇಕು’ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ನನ್ನ ಮಗಳ ಮೇಲೆ 2014 ರಿಂದ 2015 ರವರೆಗೆ ಲೈಂಗಿಕ ದೌರ್ಜನ್ಯ ನಡೆದಿತ್ತು. ನನ್ನ ನಾದಿನಿ ಮಗನೇ ದೌರ್ಜನ್ಯ ನಡೆಸಿದ್ದು. ಆತ ಲಖನೌನಿಂದ ಬಿಟೆಕ್‌ ಮಾಡಿಕೊಂಡು ಬಂದಿದ್ದ. ಒಮ್ಮೆ ಮಗಳು ಅಳುತ್ತಿದ್ದಳು. ನಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಾರಣ ಅಳುತ್ತಿರಬಹುದು ಎಂದು ಭಾವಿಸಿದ್ದೆ. ಬಳಿಕ ಲೈಂಗಿಕ ಕಿರುಕುಳ ವಿಚಾರ ಗೊತ್ತಾಯಿತು. ಉಗ್ರಪ್ಪ ಅವರ ಅಧ್ಯಕ್ಷತೆಯ ಸಮಿತಿಗೆ ದೂರು ಕೊಡಲು ಹೋದಾಗ ಸಕಾರಾತ್ಮಕವಾಗಿಯೇ ಸ್ಪಂದಿಸಿ, ಸಹಾಯ ಮಾಡಿದರು’.

ADVERTISEMENT

‘ಆದರೆ, ನಂತರ ಅವರು ದೂರು ಹಿಂದೆ ಪಡೆಯುವಂತೆ ಒತ್ತಡ ಹೇರಿದರು. ದೆಹಲಿಯಿಂದ ಒತ್ತಡವಿದೆ ಇನ್ನು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ, ತಾವು ಬರೀ ಪೋಸ್ಟ್‌ಮ್ಯಾನ್‌, ಹೆಚ್ಚಿಗೆ ಏನು ಮಾಡಲು ಸಾಧ್ಯವಿಲ್ಲ ಎಂದು ನುಣುಚಿಕೊಂಡರು’ ಎಂದು ಮಮತಾಸಿಂಗ್‌ ಹೇಳಿದರು.

ಸಮಿತಿ ಸದಸ್ಯರ ಸ್ಪಷ್ಟೀಕರಣ:ಅಧ್ಯಕ್ಷರನ್ನು ಗುರಿ ಮಾಡಿಕೊಂಡು ರಾಜಕೀಯ ಪ್ರೇರಿತ ಆರೋಪ ಮಾಡಲಾಗಿದೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಸಮಿತಿಯ ಮಹಿಳಾ ಸದಸ್ಯರು ಹೇಳಿದ್ದಾರೆ.

ಮಹಿಳೆ ಮಾಡಿರುವ ಆರೋಪಗಳು ಸಮಿತಿಯ ಕಾರ್ಯವೈಖರಿಯನ್ನೇ ಟೀಕಿಸಿದಂತಾಗಿದೆ. ವಾಸ್ತವದಲ್ಲಿ ಆ ನೊಂದ ಮಹಿಳೆ ತನಗೆ ಹಾಗೂ ತನ್ನ ಮಕ್ಕಳಿಗೆ ಆಗಿರುವ ಕೌಟುಂಬಿಕ ಹಿಂಸೆಯ ಬಗ್ಗೆ ಸಮಿತಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಆಕೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅವರೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು ಎಂದು ಮೋಟಮ್ಮ ಮತ್ತು ಇತರ ಸದಸ್ಯರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.